ಬೆಂಗಳೂರು : ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಚಲನಚಿತ್ರದ ಕೆಲಸ ಕಾರ್ಯವನ್ನು ಕಿಚ್ಚ ಸುದೀಪ್ ಮುಗಿಸಿದ್ದಾರೆ. ಇದರ ಬೆನ್ನ ಹಿಂದೆಯೇ ಸುದೀಪ್ ಅವರ ನಟನೆಯ ಮುಂದಿನ ಸಿನಿಮಾದ ಸುದ್ದಿಯೊಂದು ಹೊರಬಿದ್ದಿದೆ. ಖ್ಯಾತ ತಮಿಳು ನಿರ್ದೇಶಕರೊಬ್ಬರು ಕಿಚ್ಚನ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ.
ತಮಿಳಿನ ಸ್ಟಾರ್ ನಟ ಅಜಿತ್ ಕರಿಯರ್’ಗೆ ‘ಮಂಕಾಥ’ ಮೂಲಕ ಬ್ಲಾಕ್ ಬ್ಲಸ್ಟರ್ ಹಿಟ್ ಚಿತ್ರ ನೀಡಿದ್ದರು ನಿರ್ದೇಶಕ ವೆಂಕಟ್ ಪ್ರಭು. ಅವರು ತಮ್ಮ ಮುಂದಿನ ಚಿತ್ರಕ್ಕೆ ಕಿಚ್ಚ ಸುದೀಪ್ ಅವರನ್ನ ಹೀರೋ ಆಗಿ ಆಯ್ಕೆ ಮಾಡಿದ್ದಾರೆ. ಕಿಚ್ಚನನ್ನು ಭೇಟಿಯಾಗಿರೋ ವೆಂಕಟ್ ಪ್ರಭು, ಕಿಚ್ಚನ ಕೈರುಚಿ ಸವಿದು ಸಂತಸಗೊಂಡಿದ್ದಾರೆ.
ಇದೇ ಖುಷಿಯಲ್ಲಿ ಟ್ವೀಟ್ ಮಾಡಿರೋ ವೆಂಕಟ್ ಪ್ರಭು, ನಿಮ್ಮ ಮುಂದಿನ ಸಿನಿಮಾ ನಿರ್ದೇಶಿಸಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ವೆಂಕಟ್ ಪ್ರಭು ಸುಮಾರು ಹತ್ತು ಸಿನಿಮಾ ನಿರ್ದೆಶಿಸಿದ್ದಾರೆ. ಎಲ್ಲವೂ ತಮಿಳು ಸಿನಿಮಾಗಳು. ಕೆಲ ತಿಂಗಳ ಹಿಂದೆ ‘ಮಾನಾಡು’ ಸಿನೆಮಾದ ಶೂಟಿಂಗ್ ಮುಗಿಸಿದ್ದರು.
ಕಿಚ್ಚನಿಗೆ ಪ್ರಭುರಿಂದ ಪ್ಯಾನ್ ಇಂಡಿಯಾ ಮೂವೀ?
ಕಿಚ್ಚನಿಗಾಗಿ ವೆಂಕಟ್ ಪ್ರಭು ಪಕ್ಕಾ ಆ್ಯಕ್ಷನ್ ಥ್ರಿಲ್ಲರ್ ಕಥೆ ರೆಡಿ ಮಾಡಿದ್ದಾರೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ. ಇದರನ್ವಯ ಕಿಚ್ಚನ ಈ ಚಿತ್ರ ಪ್ಯಾನ್ ಇಂಡಿಯಾ ಆಗಲಿದೆ ಎನ್ನಲಾಗಿದೆ. ಸುದೀಪ್ ಹುಟ್ಟು ಹಬ್ಬದಂದು ಈ ಸಿನಿಮಾ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ನಿಟ್ಟಿನಲ್ಲಿ ವೆಂಕಟ್ ಪ್ರಭು ಕಿಚ್ಚನ ಮನೆಗೆ ಭೇಟಿ ಕೊಟ್ಟಿದ್ದಾರೆ. ಸದ್ಯಕ್ಕಂತೂ ಈ ನಟ- ನಿರ್ದೇಶಕರ ಭೇಟಿಯ ಫೋಟೋ ಸಖತ್ ಸುದ್ದಿಯಲ್ಲಿದೆ.