ಮಂಗಳೂರು : ದೂರದೃಷ್ಟಿ ಮತ್ತು ವೈಜ್ಞಾನಿಕವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಮಾರಕವಾಗುವ ಒಂದೇ ಒಂದು ಅಂಶವೂ ಇಲ್ಲ.ಒಂದು ವೇಳೆ ಯಾರಿಗಾದರೂ ಗೊತ್ತಿದ್ದರೆ ನನಗೆ ಬಂದು ಹೇಳಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸವಾಲು ಹಾಕಿದರು.
ಮಂಗಳೂರಿನಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,“ಕೇವಲ ರಾಜಕೀಯ ಕಾರಣಕ್ಕಾಗಿ ಶಿಕ್ಷಣ ನೀತಿಯನ್ನು ವಿರೋಧ ಮಾಡಲಾಗುತ್ತಿದೆ.ಐದೂವರೆ ವರ್ಷಗಳ ನಿರಂತರ ಅಧ್ಯಯನ, ಸಮಾಲೋಚನೆ ಹಾಗೂ ಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಅವುಗಳ ಬಗ್ಗೆ ಮಂಥನ ಮಾಡಿದ ನಂತರ ಶಿಕ್ಷಣ ನೀತಿ ರೂಪಿತಗೊಂಡಿದೆ ಎಂದರು.
ವಿದ್ಯಾರ್ಥಿಗಳಿಗೆ ವಿರುದ್ಧವಾಗಿ ಕನಿಷ್ಟ ಒಂದು ಅಂಶವನ್ನಾದರೂ ಟೀಕಾಕಾರರು ತೋರಿಸಲು ಪ್ರಯತ್ನಿಸಲಿ ಎಂದ ಸಚಿವರು, ಕೇವಲ ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ ಎನ್ನುವ ಕಾರಣಕ್ಕೆ ಶಿಕ್ಷಣದ ಕೇಸರಿ ಕರಣ ಮಾಡಲಾಗುತ್ತಿದೆ ಎಂದು ಹುಯಿಲೆಬ್ಬಿಸು ವುದು ಬಿಟ್ಟು ನೇರವಾಗಿ ಚರ್ಚೆ ಬರಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರಕಾರವು ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಹೇರುತ್ತಿಲ್ಲ.ನೀತಿಯ ಎಲ್ಲ ಹಂತಗಳ ಅಧಿಕಾರವೂ ರಾಜ್ಯದ ಬಳಿಯೇ ಇರುತ್ತದೆ.ಅದೇ ರೀತಿ,ಆತುರಾತುರವಾಗಿ ಈ ನೀತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದಾರೆ.ಇದೂ ಸರಿಯಲ್ಲ ಎಂದ ಅವರು,ನೀತಿಯ ಜಾರಿಗೆ ಮುನ್ನ ಸಾಕಷ್ಟು ಪೂರ್ವ ತಯಾರಿ,ಚರ್ಚೆ,ಚಿಂತನ-ಮಂಥನ,ಕಾರ್ಯಪಡೆ ರಚನೆ, ವರದಿ ಪಡೆಯುವುದು, ಅಸೆಂಬ್ಲಿಯಲ್ಲಿ ಚರ್ಚೆ,ವಿಷಯವಾರು ಸಮಿತಿಗಳ ರಚನೆ ಇತ್ಯಾದಿ ಕ್ರಮ ವಹಿಸಲಾಗಿದೆ.ಈ ಬಗ್ಗೆ ಗೊತ್ತಿಲ್ಲ ದೆ ಮಾತನಾಡುವವರು ವಿಷಯವನ್ನು ಅರಿತು ಮಾತನಾಡಿದರೆ ಉತ್ತಮ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಜ್ಞಾನವೆಂಬುದು ಕೂಡ ಇಂದು ದೊಡ್ಡ ಆರ್ಥಿಕತೆ.ಸಮಾಜದ,ದೇಶದ ಎಲ್ಲ ಸಮಸ್ಯೆಗಳಿಗೆ ಶಿಕ್ಷಣದಿಂದ ಲೇ ಪರಿಹಾರ ಸಾಧ್ಯ. ಶಿಕ್ಷಣ ನೀತಿಯಿಂದಲೇ ದೇಶದ ಎಲ್ಲ ಸವಾಲುಗಳಿಗೂ ಉತ್ತರ ಇದೆ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.
ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ ಇಲ್ಲ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಪಸ್ʼಗಳಲ್ಲಿ ಸಂಚರಿಸಲು ವಿದ್ಯಾರ್ಥಿ ನಿಯರ ಮೇಲೆ ಯಾವುದೇ ನಿರ್ಬಂಧ ಇಲ್ಲ.ಆದರೆ,ಎಲ್ಲ ಕ್ಯಾಂಪಸ್ʼಗಳನ್ನು ಸುರಕ್ಷತವಾಗಿರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳು ವಂತೆ ಕುಲಪತಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರು ವಿವಿ ಕುಲಸಚಿವರು ಹೊರಡಿಸಿದ್ದ ಸುತ್ತೋಲೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ರಲ್ಲದೆ,ಆ ಸುತ್ತೋಲೆ ಯನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ ಹಾಗೂ ಎಲ್ಲ ವಿವಿಗಳ ಕ್ಯಾಂಪಸ್ಸು ಗಳಲ್ಲಿ ನಿಗಾ, ಪಹರೆ,ಸಿಸಿ ಕ್ಯಾಮೆರಾಗಳ ಅಳ ವಡಿಕೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳ ಕ್ಯಾಂಪಸ್ʼಗಳು ಬಹಳ ದೊಡ್ಡದಾಗಿರುತ್ತವೆ.ಹೀಗಾಗಿ ಭದ್ರತೆ, ಸುರಕ್ಷತೆ ದೃಷ್ಟಿಯಲ್ಲಿ ಬಿಗಿ ಕ್ರಮ ಕೈಗೊಳ್ಳುವುದು ಅಗತ್ಯ.ಆದ್ದರಿಂದ ಅಗತ್ಯ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರ ಜತೆಗೆ,ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಿಗಾ ಇರಿಸಬೇಕು ಎಂದು ಅವರು ವಿವರಿಸಿದರು.
ಕೂಡಲೇ ಎಲ್ಲ ವಿವಿಗಳು ತಮ್ಮ ಕ್ಯಾಂಪಸ್ಸುಗಳು ಎಷ್ಟರಮಟ್ಟಿಗೆ ಸುರಕ್ಷಿತವಾಗಿವೆ ಎಂದಬುದನ್ನು ನೋಡಿಕೊಂಡು ವಿಳಂಬ ವಿಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅವರು ಎಲ್ಲ ಕುಲಪತಿಗಳಿಗೆ ಮಾಧ್ಯಮಗೋಷ್ಠಿಯ ಮೂಲಕ ಸೂಚನೆ ನೀಡಿದರು.
ಲಸಿಕೆ ಪಡೆಯದವರಿಗೆ ನೋ ಎಂಟ್ರಿ : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದವರು ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇದೆ.ಲಸಿಕೆ ಪಡೆಯದವರು ಆನ್ಲೈನ್ ತರಗತಿಯ ಮೂಲಕ ಕಲಿಕೆ ಮುಂದುವರಿಸಬಹುದು.ಅವರೂ ಕೂಡ ವ್ಯಾಕ್ಸಿನ್ ಪಡೆದು ನೇರ ತರಗತಿಗೆ ಹಾಜರಾಗಲು ಅಡ್ಡಿ ಇಲ್ಲ ಎಂದು ಅವರು ತಿಳಿಸಿದರು.
ಇನ್ನು, ಲಸಿಕೆ ಪಡೆಯದ ಬೋಧಕರು, ಬೋಧಕೇತರ ಸಿಬ್ಬಂದಿಗೂ ಕಾಲೇಜ್ʼಗೆ ಪ್ರವೇಶ ಇರುವುದಿಲ್ಲ. ಅವರು ಕರ್ತವ್ಯಕ್ಕೆ ಹಾಜರಾಗಬೇಕಾದರೆ ಲಸಿಕೆ ಪಡೆದೇ ಬರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.