ಬೆಂಗಳೂರು: ಮಲ್ಲೇಶ್ವರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ನೇಮಕ ಪತ್ರಗಳನ್ನು ನೀಡಿದರು.
ಮಲ್ಲೇಶ್ವರದ 5ನೇ ಮುಖ್ಯರಸ್ತೆಯಲ್ಲಿರುವ ವಾಲಿಬಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಾಬ್ ಮೇಳದಲ್ಲಿ 351 ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕಿದ್ದು, ಎಲ್ಲರಿಗೂ ಸ್ಥಳದಲ್ಲಿಯೇ ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಒಟ್ಟು 42ಕ್ಕೂ ಹೆಚ್ಚು ಕಂಪನಿಗಳು ನೇಮಕ ಪ್ರಕ್ರಿಯೆ ನಡೆಸಿದವು. ಒಟ್ಟು 2050 ಅಭ್ಯರ್ಥಿಗಳು ನೋಂದಾಯಿಸಿಕೊಂಡು, 1510 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 582 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ ನಂತರ ಅಂತಿಮವಾಗಿ 351 ಅಭ್ಯರ್ಥಿಗಳು ವಿವಿಧ ಕಂಪನಿಗಳ ಕೆಲಸಕ್ಕೆ ಆಯ್ಕೆಯಾಗಿದ್ದಾರೆಂದು ಡಾ.ಅಶ್ವತ್ಥನಾರಾಯಣ ಮಾಹಿತಿ ತಿಳಿಸಿದರು.
ಇನ್ನಷ್ಟು ಜಾಬ್ ಮೇಳಗಳನ್ನು ನಡೆಸಲಾಗುವುದು. ಉದ್ಯೋಗ ಅಗತ್ಯ ಇರುವ ಅಭ್ಯರ್ಥಿಗಳು ಹಾಜರಾಗಿ ಅವಕಾಶವನ್ನು ಪಡೆಯಬಹುದು ಎಂದ ಸಚಿವರು, ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಷ್ಟೇ ಉದ್ಯೋಗಾಂಕ್ಷಿಗಳು ಬಂದರೂ ಅಗತ್ಯ ತರಬೇತಿ, ಭಾಷಾ ಕೌಶಲ್ಯತೆ ಕಲಿಸಿ ಕೆಲಸ ಕೊಡಸಲಾಗುವುದು ಎಂದರು.