ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ‘ಆಪರೇಷನ್ ಕಮಲ’ದಂಥ ʼಅನೈತಿಕʼ ನಿರ್ಲಜ್ಜ,ನೀಚ ರಾಜಕಾರಣವನ್ನು RSS ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ.ರವಿಯವರೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಆರ್ ಎಸ್ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವ ವೇಳೆ ಸಂಘದ ಶಾಖೆಗೆ ಬಂದು ಅಧ್ಯಯನ ಮಾಡಿ ಎಂದು ಹೇಳಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು,ಸಿ.ಟಿ.ರವಿ ಅವರು ನೀಡಿರುವ ಪ್ರತಿ ಹೇಳಿಕೆಗೂ ಟಾಂಗ್ ಕೊಟ್ಟಿದ್ದಾರೆ.

ಸಿ.ಟಿ ರವಿ ಅವರೇ,ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. ಆರ್ ಎಸ್ಎಸ್ ಬಗ್ಗೆ ಜ್ಞಾನಾರ್ಜನೆ,ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ.ನಿಮ್ಮ ಸಂಘದೊಳಗಿನ ವಾಸ್ತಾವಾಂಶ ಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ.ಇನ್ನು ಶಾಖೆಯ ನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು.ನೀವೇ ಒಮ್ಮೆ ಊಹಿಸಿ ಎಂದು ಲೇವಡಿ ಮಾಡಿದ್ದಾರೆ.
ಸ್ವಜನ ಪಕ್ಷಪಾತ,ಭ್ರಷ್ಟಾಚಾರ,ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ.ನಿಮ್ಮ ಪಕ್ಷ ಮತ್ತು ನಿಮ್ಮ ಸರಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ,ಕುಟುಂಬ ರಾಜಕಾರಣ,ಸ್ವಜನ ಪಕ್ಷಪಾತದ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ RSS ಶಾಖೆಯಲ್ಲೇ ತರಬೇತಿ ನೀಡಲಾಯಿತಾ?ಎಂದು ಅವರು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದಾರೆ.ಪತ್ರಿಕೆ ಓದಿ.ಅದರಲ್ಲಿ ಬದುಕು ಸಾಕೆನಿದೆ-ಭಗವಂತನಿಗೂ ಕರುಣೆ ಇಲ್ಲಎನ್ನುವ ವರದಿ ಇದೆ.ಬೆಂಗಳೂರಿನ ಶ್ರೀನಿವಾಸನಗರದ ಬಿ.ಆರ್.ವಾಸುದೇವ ಎಂಬ ಬೀದಿಬದಿ ವ್ಯಾಪಾರಿ ಹೇಳಿರುವ ಮಾತುಗಳನ್ನು ಒಮ್ಮೆ ಓದಿ. ಆಗಲಾದರೂ ನಿಮ್ಮ ಕಲ್ಲು ಹೃದಯ ಕರಗಬಹುದು ಎಂದು ಸಿ.ಟಿ.ರವಿಗೆ ಕಟುಕಿದ್ದಾರೆ.

ಶಿವಮೊಗ್ಗದಲ್ಲಿ 2,000 ರೂ. ಪರಿಹಾರ ಪಡೆಯಲು 100 ರೂ.ಲಂಚ ಕೇಳಿದ ವರದಿಗಳು ಬಂದಿವೆ.ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ RSS ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿ ಲ್ಲವಾ ಸಿ.ಟಿ.ರವಿಯವರೇ? ಎಂದು ಸರಣಿ ಪ್ರಶ್ನೆಗಳ ಮೂಲಕ ಸವಾಲು ಹಾಕಿದ್ದಾರೆ.
ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು.ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೆ ಹೊರತು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು,ಅದಕ್ಕೆ ಕೊಳ್ಳಿ ಇಡಬಾರದು. ಆರ್ ಎಸ್ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ ಅಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
ಜನ ಪ್ರತಿನಿಧಿಗಳನ್ನು,ಸರಕಾರಗಳನ್ನು,ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯ ದಲ್ಲ.ಅರ್ಥ ಮಾಡಿಕೊಳ್ಳಿ ಸಿ.ಟಿರವಿಯರೇ. ನಾನು ಸತ್ಯದ ಪರ ಎಂದು ಬಿಜೆಪಿ ನಾಯಕರ ವಾಗ್ದಾಳಿಗೆ ಪ್ರತಿದಾಳಿ ನಡೆಸಿದ್ದಾರೆ.