ಬೆಂಗಳೂರು: ಶಿಕ್ಷಣ ತಜ್ಞ, ಕರ್ಮಯೋಗಿ ಎಂ.ಎಸ್. ರಾಮಯ್ಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಟೂರ್ನಿ ಯಶಸ್ವಿಯಾಗಿ ನಡೆಯಿತು.
ಬೆಂಗಳೂರು ಗ್ರಾಮೀಣ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ನಿಂದ ಆಯೋಜಿಸಲಾಗಿದ್ದ ಟೇಬಲ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಹಾಗೂ 17 ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದೇಶ್ನಾ ಎಂ ವೆಂಕಟೇಶ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಬಾಲಕರ 17 ವಯೋಮಿತಿಯೊಳಗಿನ ವಿಭಾಗದಲ್ಲಿ ರೋಹಿತ್ ಶಂಕರ್, ಬಾಲಕಿಯರ 19 ವಯೋಮಿತಿಯೊಳಗಿನ ವಲಯದಲ್ಲಿ ಅನರ್ಘ್ಯ ಮಂಜುನಾಥ್, 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಕಾಶ್ ಕೆ.ಜೆ, ಪುರುಷರ ಸಿಂಗಲ್ಸ್ ನಲ್ಲಿ ರಕ್ಷಿತ್ ಆರ್. ಬಾರಿಗಿಬಾದ್, ಎನ್.ಎಂ.ಎಸ್. ವಿಭಾಗದಲ್ಲಿ ಪಿ. ಯಶವಂತ್ ಪ್ರಶಸ್ತಿ ಗೆದ್ದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರ ಪ್ರದೇಶ ಉಸ್ತುವಾರಿ ಎಂ.ಎಸ್. ರಕ್ಷಾ ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ರಕ್ಷಾ ರಾಮಯ್ಯ, ಟೇಬಲ್ ಟೆನಿನ್ ಅತ್ಯಂತ ಚುರುಕಿನ ಆಟ. ಮೈ, ಮನಸ್ಸಿಗೆ ಕಸರತ್ತು ನೀಡುವ, ಸದಾ ನಮ್ಮನ್ನು ಜಾಗೃತವಾಗಿಡುವಂತೆ ಮಾಡುವ ಕ್ರೀಡೆ. ಟೇಬಲ್ ಟೆನಿಸ್ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಎಲ್ಲಾ ವಯೋಮಾನದವರ ಕ್ರೀಡೆ ಇದಾಗಿದ್ದು, ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಇಲ್ಲಿ ಪ್ರಶಸ್ತಿ ಗೆದ್ದವರು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
#raksha ramaiah #andrapradesh incharge #congress youth national genral secretary #table tennis #m s ramaiaha