PRIYANK KHARGE DOES NOT WANT DEVELOPMENT: ಪ್ರಿಯಾಂಕ್ ಖರ್ಗೆ ಅವರಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ ಟೀಕೆ

ಬೆಂಗಳೂರು: ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5,000 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದು ಬಿಟ್ಟು ವಿರೋಧಿಸುತ್ತಿರುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಒದಗಿಸುವುದಾಗಿ ಅತ್ಯಂತ ಬದ್ಧತೆಯಿಂದಲೇ ಘೋಷಿಸಿದ್ದೇನೆ. ಕಳೆದ ವರ್ಷ 3,000 ಕೋಟಿ ರೂ. ಅನುದಾನ ಘೋಷಿಸಿದ್ದೆ. ಅದನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ ಎಂದರು.
ಪ್ರಿಯಾಂಕ್ ಖರ್ಗೆ ಅವರು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಅವರು ವಿರೋಧಿಸಿರುವುದನ್ನು ನೋಡಿದರೆ, ಈ ಪ್ರದೇಶ ಸದಾ ಹಿಂದುಳಿದಿರಲಿ ಎಂಬುದೇ ಅವರ ಇಚ್ಛೆಯಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮುಂದಾದಾಗ ಎಲ್ಲರೂ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಇದರಲ್ಲಿ ರಾಜಕಾರಣದ ಮಾತಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಎಲ್ಲದಕ್ಕೂ ರಾಜಕಾರಣ ಸಲ್ಲದು
ಬಳ್ಳಾರಿಯ ವಿಮ್ಸ್ ಘಟನೆಗೆ ಸಚಿವ ಡಾ. ಸುಧಾಕರ್ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಹೇಳಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕರ್ನಾಟಕ ಖಾಸಗಿ ವೈದ್ಯರ ಮಸೂದೆಯನ್ನು ಮಂಡಿಸಿತ್ತು.

ಇದನ್ನು ವಿರೋಧಿಸಿ, ರಾಜ್ಯದಾದ್ಯಂತ ಖಾಸಗಿ ವೈದ್ಯರು 5 ದಿನಗಳ ಕಾಲ ಮುಷ್ಕರ ನಡೆಸಿದ್ದರಿಂದ ಸುಮಾರು 80 ಜನರು ಮೃತಪಟ್ಟರು. ಆಗ ಅಂದಿನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರಾ? ಎಂದು ತಿರುಗೇಟು ನೀಡಿದರು. ಎಲ್ಲದಕ್ಕೂ ರಾಜಕಾರಣ ಮಾಡುವ ಪ್ರವೃತ್ತಿ ಕಾಂಗ್ರೆಸ್ನದ್ದು ಎಂದು ನುಡಿದರು.
ವ್ಯವಸ್ಥಿತ ಷಡ್ಯಂತ್ರ:
ತೆಲಂಗಾಣದಲ್ಲಿಯೂ 40 ಶೇ. ಸರ್ಕಾರ ಎಂಬ ಫ್ಲೆಕ್ಸ ಗಳನ್ನು ಅಳವಡಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಯವರು ಈ ಬಗ್ಗೆ ನನಗೆ ಗೊತ್ತಿಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ. ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ ಹಾಕುವುದು ಎಷ್ಟು ಸಮಂಜಸ? ಇದನ್ನು ಖಾಸಗಿಯವರು ಮಾಡಿದ್ದಾರೋ ಅಥವಾ ಸರ್ಕಾರ ಹಾಕಿರುವುದೋ ನನಗೆ ಗೊತ್ತಿಲ್ಲ. ಇಂತಹ ಬೆಳವಣಿಗೆಗಳು ಉಭಯರಾಜ್ಯಗಳ ಸೌಹಾರ್ದತೆಗೆ ಧಕ್ಕೆ ತರುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

#cm basavaraj bommai #telangana #40%commission #politics #congress #priyank kharge #kalyan karnataka development

More News

You cannot copy content of this page