ಇಂದು ಕೋಟಿ ಕಂಠ ಗಾಯನದ ಸಂಭ್ರಮ. ನನ್ನ ನಾಡು ನನ್ನ ಹಾಡು ಕಾರ್ಯಕ್ರಮದ ಸಡಗರ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ನಿನ್ನೆಯೇ ಈ ಕುರಿತು ಮಾಹಿತಿ ನೀಡುತ್ತ, ಆಕಾಶ, ನೆಲ, ಜಲಗಳಲ್ಲಿ ಕೋಟಿ ಕಂಠ ಗಾಯನ ಮೊಳಗಲಿದೆ. ಕನ್ನಡದ ಕಂಪು ಜಗತ್ತಿನಾದ್ಯಂತ ಅನುರಣಿಸಲಿದೆ ಎಂದು ಹೇಳಿದ್ದರು.
ಅದಕ್ಕೆ ಪೂರಕವಾಗಿ ಇಂದು ಬೆಳಗ್ಗೆಯೇ ಆಕಾಶದಲ್ಲಿ ಕೋಟಿ ಕಂಠ ಗಾಯನ ಮೊಳಗಿದೆ. ಅದರ ಧ್ವನಿ ಭೂಮಿಗೂ ತಲುಪಿದೆ. ಒಂದೂವರೆ ನಿಮಿಷದ ವಿಡಿಯೋ ಕೂಡ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಎಂಬ ಶೀರ್ಷಿಕೆಯನ್ನೂ ಟ್ವೀಟ್ನಲ್ಲಿ ಸಚಿವ ಸುನಿಲ್ ಕುಮಾರ್ ನೀಡಿದ್ದಾರೆ.
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು pic.twitter.com/iaV7DTPVi8
— Sunil Kumar Karkala (@karkalasunil) October 28, 2022
ವಿವಿಧೆಡೆ ಕೋಟಿ ಕಂಠ ಗಾಯನಕ್ಕೆ ಸಿದ್ಧತೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50,000 ಜನರು ಆಯ್ದ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಿದ್ದಾರೆ. ವಿಧಾನಸೌಧದ ಮೆಟ್ಟಿಲು, ಎಲ್ಲ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ಆಟೊ ತಂಗುದಾಣಗಳು, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲಾಲ್ಬಾಗ್ಗಳಲ್ಲಿ ಕೋಟಿ ಕಂಠ ಗಾಯನಕ್ಕೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಏನಿದು ಕೋಟಿ ಕಂಠ ಗಾಯನ?
ದೇಶ- ವಿದೇಶಗಳಿಂದ ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಕನ್ನಡಿಗರು ಉತ್ಸಾಹದಿಂದ ಮುಂದೆ ಬಂದಿದ್ದು, ಇಂದು ಕೋಟಿ ಕಂಠಗಳಲ್ಲಿ ಕನ್ನಡದ ವೃಂದ ಗಾಯನ ಮೊಳಗಿ ದಾಖಲೆ ಸೃಷ್ಟಿಯಾಗಲಿದೆ. ಈ ಕಾರ್ಯಕ್ರಮ ನಿಮಿತ್ತ ಇಲಾಖೆ ವತಿಯಿಂದ ಪ್ರತ್ಯೇಕ ಕ್ಯೂ ಆರ್ ಕೋಡ್ ಆರಂಭಿಸಲಾಗಿತ್ತು.
ಮಂಗಳವಾರ ರಾತ್ರಿ ಕ್ಯೂ ಆರ್ ಕೋಡ್ನಲ್ಲಿ 1.1ಕೋಟಿ ಹೆಸರು ನೋಂದಣಿಯಾಗಿತ್ತು. ಇದೀಗ ಈ ಸಂಖ್ಯೆ1.10 ಕೋಟಿಗೆ ತಲುಪಿದೆ. ಮುಂದಿನ ಎರಡು ದಿನಗಳಲ್ಲಿ ಈ ಸಂಖ್ಯೆ 1.50 ಕೋಟಿ ಮೀರಲಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ ಸುನಿಲ್ ಕುಮಾರ್ ನಿನ್ನೆ ಹೇಳಿದ್ದರು.
ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ ವಿಶೇಷ
1,12,00,000 – ನೋಂದಣಿ ಮಾಡಿಸಿದವರ ಸಂಖ್ಯೆ
10,000 – ಸ್ಥಳಗಳಲ್ಲಿ ಗಾಯನಕ್ಕೆ ವೇದಿಕೆ
46 ದೇಶಗಳಿಂದ ನೋಂದಣಿ
26 ರಾಜ್ಯಗಳ ಕನ್ನಡಿಗರು
19,000 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು
ಯಾವ ಆರು ಹಾಡುಗಳು
1. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ
2. ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು
3. ಡಾ.ಚನ್ನವೀರ ಕಣವಿ ಅವರ ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ
4. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ
5. ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ
6. ಡಾ. ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಹಾಡುಗಳ ಪೂರ್ಣ ಪಾಠ ಈ ಕೆಳಗಿನ ಪೋಸ್ಟ್ನಲ್ಲಿದೆ.
