ಬಾಗಲಕೋಟೆ: ರಾಜ್ಯ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಬೆಂಬಲಿಗರು ಹಂಚಿಕೆ ಮಾಡುತ್ತಿದ್ದ ಸಕ್ಕರೆಯನ್ನ ಮಹಿಳೆಯೊಬ್ಬಳು ತಿರಸ್ಕರಿಸಿ, ಸಕ್ಕರೆ ಚೀಲ ಮರಳಿ ಕೊಂಡೊಯ್ಯುವಂತೆ ಹೇಳಿರೋ ವಿಡಿಯೋ ಇದೀಗ ವೈರಲ್ ಆಗಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಗಲಗಲಿ ಗ್ರಾಮದಲ್ಲಿ ನಿರಾಣಿ ಅವರ ಬೆಂಬಲಿಗರು ಮನೆ ಮನೆಗೆ ಸಕ್ಕರೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಮನೆ ಮುಂದೆ ನಿಂತು ಸಕ್ಕರೆ ಚೀಲ ತಂದು ಕೊಡಲು ಹೋದಾಗ, ಸಕ್ಕರೆಯನ್ನ ಸ್ವೀಕರಿಸಲು ನಿರಾಕರಿಸಿದ ಮಹಿಳೆ ಮರಳಿ ಕೊಂಡೊಯ್ಯುವಂತೆ ಸೂಚಿಸಿದ್ದಾರೆ.

ಇನ್ನು ಸಕ್ಕರೆ ಚೀಲ ತೆಗೆದುಕೊಳ್ಳಲು ನಿರಾಕರಿಸಿದ ಮಹಿಳೆ, ಒತ್ತಾಯಪೂರ್ವಕವಾಗಿ ನೀಡಲು ಮುಂದಾದ ಸಕ್ಕರೆ ಚೀಲವನ್ನ ತಂದು ತಮ್ಮ ಮನೆಯ ಬಾಗಿಲು ಹೊರಗೆ ಇಟ್ಟಿದ್ದು, ಸಕ್ಕರೆ ಚೀಲ ನಿರಾಕರಿಸಿದ ಮಹಿಳೆಯ ವರ್ತನೆಗೆ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಗ್ರಾಮದಲ್ಲಿ ಈ ರೀತಿ ಮಹಿಳೆಯರ ವರ್ತನೆ ಬೆಂಬಲಿಸಿ ವಿಡಿಯೋ ಶೇರ್ ಮಾಡಿರೋ ಸಾಮಾಜಿಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಈ ತಾಯಿಗಿರುವ ನಿಯತ್ತಿಗೆ ಜನತೆಯಿಂದ ಧನ್ಯವಾದಗಳನ್ನ ಅರ್ಪಿಸಿದ್ದಾರೆ,

ಚುನಾವಣೆ ಸಮೀಪಿಸುತ್ತಿರುವಾಗ ಆಸೆ, ಆಮಿಷಗಳಿಗೆ ಬಲಿಯಾಗದೆ ಪ್ರಬುದ್ಧತೆ ತೋರುವ ಇಂತಹ ಜನರಿಂದ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ, ಇಂತಹ ಆಲೋಚನೆ ಎಲ್ಲ ಮತದಾರರಿಗೂ ಬರಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ.
#MURUGESH NIRANI #SUGAR DISTRIBUTION #REJECTED #LADY BILAGI #GALIGALI VILLAGE #FOLLOWERS