ಬೆಂಗಳೂರು : ರಾಜ್ಯದ ಮಂಡ್ಯ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರವಾಸ ಮಾಡಿದ್ದು, ಈ ಸಂದರ್ಭದಲ್ಲಿ ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ಆಯೋಜಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪದಾಧಿಕಾರಿಗಳಿಗೆ ಅಭಿನಂದನಾ ಪತ್ರ ಬರೆದ ಬಿ.ಎಲ್. ಸಂತೋಷ್, ಒಂದು ಪುಟದ ಪತ್ರದಲ್ಲಿ ಎಲ್ಲಾ ಪದಾಧಿಕಾರಿಗಳನ್ನು ನೆನಪಿಸಿಕೊಂಡು ಅಭಿನಂದಿಸಿದ್ದಾರೆ.

ಪತ್ರದಲ್ಲಿ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸಿ. ಪಿ. ಉಮೇಶ್, ಸಚಿವ ಹಾಗೂ ಕೆ. ಆರ್.ಪೇಟೆ ಶಾಸಕ ಡಾ.ಕೆ.ಸಿ. ನಾರಾಯಣಗೌಡ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾನಾ, ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜುಗೌಡ ಸೇರಿದಂತೆ ಹಲವ ಹೆಸರನ್ನು ಉಲ್ಲೇಖಿಸಿದ್ದು, ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

ನಿಮ್ಮೆಲ್ಲರ ಪರಿಶ್ರಮದಿಂದ ಪ್ರಧಾನಿನರೇಂದ್ರ ಮೋದಿ ಅವರ ರೋಡ್ ಶೋ ಯಶಸ್ವಿಯಾಗಿದೆ. 41 ವರ್ಷಗಳ ಬಳಿಕ ಪ್ರಧಾನಿಗಳು ಜಿಲ್ಲೆಗೆ ಕಾಲಿಟ್ಟಿದ್ದು, ಅವರಿಗೆ ತಾವು ನೀಡಿದ ಗೌರವಕ್ಕೆ ಅಭಿನಂದನೆಗಳು. ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ ಎಂದು ಆಶಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸೀಟು ಗೆಲ್ಲುವುದು ಮುಖ್ಯ. ಈಗಾಗಲೇ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿ ಮಾಡಿದ್ದೀರಿ. ನರೇಂದ್ರ ಮೋದಿ ಅವರ ರೋಡ್ ಶೋ ಯಶಸ್ವಿಗೊಳಿಸಿದ್ದೀರಿ. ಕಾರ್ಯಕರ್ತರ ಜೊತೆಗೂಡಿ, ಮಂಡ್ಯದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅರಳಿಸಿ ಎಂದು ಪತ್ರದಲ್ಲಿ ತಿಳಿಸಿ, ಸಂತೋಷ್ ಅವರು ಅಭಿನಂದಿಸಿದ್ದಾರೆ.