ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್-ಎಎಪಿ-KRPP ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಹೇನೆಯುವುದರಲ್ಲಿ ನಿರತವಾಗಿವೆ.
ಇನ್ನು ಚುನಾವಣೆಗೂ ಮುನ್ನವೇ ರಾಜ್ಯ ಚುನಾವಣೆ ಬಿಸಿ ತುಪ್ಪದಂತೆ ಪರಿಣಮಿಸಿದೆ ಏಕೆಂದರೆ ಈಗಾಗಲೇ ಬೆಂಗಳೂರಿನ ಪ್ರಮುಖ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂದು ಆಗ್ರಹ ಕೇಳಿ ಬರುತ್ತಿದೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ರಾಜಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಇನ್ನು ಈ ಮಧ್ಯೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾಕೋ ಕಾಂಗ್ರೆಸ್ ಪಕ್ಷಕ್ಕೆ ಅಂದುಕೊಂಡಂತೆ ಆಗಿಬರುತ್ತಿಲ್ಲ ಈಗಾಗಲೇ ವಿಧಾನಸಭೆ ಚುನಾವಣೆಗೆ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಆಕಾಂಕ್ಷಿಗಳ ದಂಡೇ ಇದೆ. ಅದರಲ್ಲಿ ಮಾಜಿ ಮಹಾಪೌರರಾದ ಬಿ.ಎಸ್.ಪುಟ್ಟರಾಜು ಕೂಡ ಒಬ್ಬರು.
ಈಗಾಗಲೇ ಕ್ಷೇತ್ರ ಸುತ್ತಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಪುಟ್ಟರಾಜು ಈ ಭಾರಿ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗಿತ್ತು. ಆದರೆ, ಇತ್ತೀಚಿಗೆ ಬಿಜೆಪಿ ತೊರೆದು ಕೈ ಹಿಡಿದಿರುವ ನಿಕಟಪೂರ್ವ ವಿಧಾನಪರಿಷತ್ ಸದಸ್ಯ ಪುಟ್ಟಣ್ಣಗೆ ಟಿಕೆಟ್ ಖಾತ್ರಿಯಾಗುತ್ತಿದ್ದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಪಕ್ಷದ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದು ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಇನ್ನು ಈ ವಿಚಾರವಾಗಿ ವೀರಶೈವ-ಲಿಂಗಾಯತ ಬಳಗ ಹಾಗು ವಿಶ್ವ ವೀರಶೈವ ಯುವ ವೇದಿಕೆ ಸದಸ್ಯರು ಸಭೆ ನಡೆಸಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಎಚ್ಚರಿಕೆಯ ಘಂಟೆ ರವಾನಿಸಿದ್ದಾರೆ ಮತ್ತು ಒಂದು ವೇಳೆ ಪುಟ್ಟರಾಜುಗೆ ಟಿಕೆಟ್ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜಯದ್ಯಂತ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.