ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎನ್ನುವ ಕಾಂಗ್ರೆಸ್ ನವರು ಯಾವ ಟೀಂ. ಅವರು ತಮಿಳುನಾದಿನ ಟೀಮಾ ಅಥವಾ ಡಿಎಂಕೆಯ ಬಿ ಟೀಮಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಜೆಪಿ ಭವನದಲ್ಲಿ ಇಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಸಮ್ಮುಖದಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಅಂತ ಹೇಳಿದೀವು. ಈಗ ಅವರು ಬಿಜೆಪಿ ಜತೆ ಕೈ ಜೋಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಾಗಾದರೆ, ಅವರು ಬದುಕು ಕಂಡುಕೊಂಡಿರುವ ಪ್ರಾದೇಶಿಕ ಪಕ್ಷಗಳ ಬಳಿ ಕಾಂಗ್ರೆಸ್ ಸ್ಥಿತಿ ಏನು? ಅದು ಆ ಪಕ್ಷಗಳ ಬಿ ಟೀಂ ಅಲ್ಲವೇ? ಎಂದು ಅವರು ಕುಟುಕಿದರು.
ಬಿಜೆಪಿ ಜತೆ ಅಧಿಕಾರ ಅನುಭವಿಸಿದ ಪಕ್ಷಗಳ ಜತೆ ಸಖ್ಯ ಬೆಳೆಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಬಿ ಟೀಂ, ಎ ಟೀಂ ಎಂದು ಮಾತನಾಡುವ ನೈತಿಕತೆ ಇದೆಯೇ ಎಂದು ಹರಿಹಾಯ್ದ ಮಾಜಿ ಮುಖ್ಯಮಂತ್ರಿ ಅವರು; ಅಂದು ಗುಲಾಂ ನಭಿ ಅಜಾದ್, ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಕೂಡ ಇದ್ದರು. ಕುಮಾರಸ್ವಾಮಿಗೆ ಸಿಎಂ ಸ್ಥಾನ ಬೇಡ, ನಿಮ್ಮಲ್ಲೇ ಒಬ್ಬರು ಸಿಎಂ ಆಗಿ ಎಂದರು ದೇವೇಗೌಡರು. ಆದರೆ ಕೇಂದ್ರದ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು ಅಂದರು. ಆ ದಿನಗಳು ಕಾಂಗ್ರೆಸ್ ಪಕ್ಷಕ್ಕೆ ನೆನಪಿಲ್ಲವೇ? ಆಗ ಬಿಜೆಪಿ ಬಿ ಟೀಂ ಎಂಬುದು ಅರಿವಿಗೆ ಬರಲಿಲ್ಲವೇ ಎಂದರು ಅವರು.

ಆ ದಿನವೇ ಅಮಿತ್ ಶಾ ಅವರಿಂದ ನನಗೆ ಕರೆ ಬಂತು. ಅವತ್ತು ಬಿಜೆಪಿ ಜೊತೆ ಹೋಗಿದ್ದಿದ್ದರೆ ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತಿದ್ದೆ. ಆದರೆ, ನಾನು ಹಾಗೆ ಮಾಡಲಿಲ್ಲ. ಈಗ ಸುಳ್ಳು ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದೆಲ್ಲಾ ಗೊತ್ತಿಲ್ಲವೇ? ಎಂದು ಅವರು ಚಾಟಿ ಬೀಸಿದರು.
ಅಂದು ಸರಕಾರ ಬೀಳಿಸುವಾಗ ಬಿಜೆಪಿಯ 5 ಜನ ಶಾಸಕರು ಬೆಂಬಲ ಕೊಡಲು ಮುಂದಾಗಿದ್ದರು. ಆದರೆ 5 ಜನ ಬಿಜೆಪಿ ಶಾಸಕರು ಬಂದರೆ ಕಾಂಗ್ರೆಸ್ ನ ಇನ್ನೂ 5 ಜನರನ್ನು ಕಳುಹಿಸುತ್ತೇವೆ ಎಂದಿದ್ದರು ಒಬ್ಬರು. ಅವರು ಯಾರೂ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇವರು ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಅವರು ಕಿಡಿಕಾರಿದರು.
2004ರಲ್ಲಿಯೇ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಸಿದ್ದರಾಮಯ್ಯ ಆ ಪ್ರಯತ್ನ ಮಾಡಿದ್ದರು. ನಾಲ್ಕುಜನ ಸೇರಿ ಎಲ್ಲಿಗೆ ಹೋಗಿದ್ದರು ಎಂದು ಫ್ಲೈಟ್ ಟಿಕೆಟ್ ತೋರಿಸಬೇಕಾ? ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ನಿಂದ ಅಲ್ಪಸಂಖ್ಯಾತ ನಾಯಕರು ದೂರ ಆಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಇದೆಲ್ಲಾ ರಾಜಕೀಯದಲ್ಲಿ ನಡೆಯುತ್ತಿರುತ್ತದೆ. ಇಬ್ರಾಹಿಂ ಅವರಿಗೂ ಈ ಎಲ್ಲ ವಿಚಾರಗಳನ್ನು ಆಯಾ ಕಾಲಕ್ಕೆ ಮಾಹಿತಿ ಕೊಡ್ತಾ ಬಂದಿದ್ದೇನೆ ಎಂದು ತಿಳಿಸಿದರು.
ಕೆಲವರು ಗುಪು ಮಾಡಿಕೊಂಡು ಸಭೆ ಮಾಡಲು ಉದ್ದೇಶಿಸಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನಾವೆಂದೂ ನಿಮಗೆ ಅಗೌರವ ತೋರಿಸಿಲ್ಲ. ಇದನ್ನು ಅರಿತುಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು ಅವರು.

ಮುಸ್ಲಿಮರ ಹಿತ ರಕ್ಷಣೆ ಎಂದಲ್ಲ. ಇಡೀ ನಾಡಿನ ಜನರ ರಕ್ಷಣೆ ಮಾಡುತ್ತೇವೆ. ಅದಕ್ಕಾಗಿಯೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದಿದ್ದರೆ ಅಲ್ಲಿಯೂ ನನಗೆ ಅಲ್ಪಸಂಖ್ಯಾತರ ಓಟ್ ಬರುತ್ತಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿದ್ದರು. ಜೆಡಿಎಸ್ – ಬಿಜೆಪಿ ಫೈಟ್ ಇದ್ದ ಕಾರಣ ನನಗೆ ಓಟ್ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ನೇರ ಮಾತುಗಳಲ್ಲಿ ಹೇಳಿದರು.
ಅಮಿತ್ ಶಾ ಕಾಲು ಹಿಡಿಯಲು ಹೋಗಿದ್ದಾರೆ ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮೈತ್ರಿಯ ಸಂಕಟ ಅವರನ್ನು ಬಾಧಿಸುತ್ತಿದೆ. 2018ರಲ್ಲಿ ಇವರು ಯಾರ ಕಾಲು ಹಿಡಿಯಲು ಬಂದಿದ್ದರು? ಒಮ್ಮೆ ಪ್ರಿಯಾಂಕ್ ಖರ್ಗೆ ನೆನಪು ಮಾಡಿಕೊಳ್ಳಲಿ. ವಿಷಯ ಗೊತ್ತಿಲ್ಲದೆ ಜೆಡಿಎಸ್ ಬಗ್ಗೆ ಮಾತಾಡಲು ಹೋಗಬೇಡಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಕಾಂಗ್ರೆಸ್ ನ ನಾಗಾಲೋಟಕ್ಕೆ ಕಡಿವಾಣ ಹಾಕಲು ಈ ಮೈತ್ರಿ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ಎಲ್ಲಿದೆ ನಾಗಾಲೋಟ? ಕಾವೇರಿ ನಾಗಾಲೋಟದಿಂದ ತಮಿಳುನಾಡಿಗೆ ಹರಿಯುತ್ತಿದ್ದಾಳೆ. ಎಲ್ಲರಿಗೂ ಕಾಣುತ್ತಿವೆಯಲ್ಲ. ಇದರಿಂದ ಜಲ ಸಂಪನ್ಮೂಲ ಸಚಿವರು ತೃಪ್ತರಾಗಿರಬೇಕು ಅಷ್ಟೇ ಎಂದು ಅವರು ಛೇಡಿಸಿದರು.
ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಶಾಸಕ ಎಂ.ಟಿ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಿ.ಎಂ.ಫಾರೂಕ್, ಮಂಜೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.