ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವ ಹಾಗೂ ಶೈಕ್ಷಣಿಕವಾಗಿ ಕಲ್ಯಾಣ ಕರ್ನಾಟಕ ಭಾಗವನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನ ಹಮ್ಮಿಕೊಳ್ಳುವಂತೆ ರಾಜ್ಯಪಾಲರಾದ ಥಾವರ್ ಚಾಂದ್ ಗೆಹಲೋಟ್ ಅವರು ಕಲ್ಯಾಣ ಕರ್ನಾಟಕ ಭಾಗದ ಸಚಿವರು ಹಾಗೂ ಜನಪ್ರತಿನಿಧಿಗಳ ನಿಯೋಗಕ್ಕೆ ಸಲಹೆ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ಹಮ್ಮಿಕೊಳ್ಳುತ್ತಿರುವ ಯೋಜನೆಗಳ ಬಗ್ಗೆ ಮಾನ್ಯ ರಾಜ್ಯ ಪಾಲರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಚಿವರಾದ ಎನ್.ಎಸ್ ಬೋಸರಾಜು, ಶರಣ ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಜಯ್ ಸಿಂಗ್, ಯೋಜನೆ ಮತ್ತು ಸ್ಯಾಂಖಿಕ ಸಚಿವರಾದ ಡಿ ಸುಧಾಕರ್ ಸೇರಿದಂತೆ ಆ ಭಾಗದ ಶಾಸಕರ ನಿಯೋಗ ರಾಜ್ಯಪಾಲರನ್ನ ಇಂದು ಭೇಟಿ ಮಾಡಿ ಚರ್ಚಿಸಿದರು.

ನಂಜುಂಡಪ್ಪ ವರದಿಯ ಅನ್ವಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆ ಗಳನ್ನು ಯೋಜಿಸಲಾಗಿದೆ. ಶಿಕ್ಷಣಕ್ಕೆ ಅಭಿವೃದ್ಧಿ ಮಂಡಳಿಯ ಅನುದಾನದ ಶೇಕಡಾ 25 ರಷ್ಟು ಮಿಸಲಾಗಿಡಲಾಗಿರುವುದನ್ನ ರಾಜ್ಯಪಾಲರಿಗೆ ತಿಳಿಸಲಾಯಿತು.