Modern Technology to Catch Leopard: ಚಿರತೆ ಸೆರೆಗೆ ಆಧುನಿಕ ತಂತ್ರಜ್ಞಾನ ಬಳಕೆ: ಈಶ್ವರ ಖಂಡ್ರೆ

ಬೆಂಗಳೂರು, ಅ.31: ಬೆಂಗಳೂರು ನಗರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಉಂಟು ಮಾಡಿದ್ದು, ಆದಷ್ಟು ಶೀಘ್ರ ಚಿರತೆ ಹಿಡಿಯಲು ಇಲಾಖೆ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಬೆಂಗಳೂರಿನಂತಹ ಮಹಾನಗರದಲ್ಲೂ ಥರ್ಮಲ್ ಇಮೇಜ್ ಕ್ಯಾಮರಾಗಳನ್ನು ಬಳಸಿ ರಾತ್ರಿಯ ವೇಳೆಯೂ ಚಿರತೆ ಪತ್ತೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಾಚರಣೆ ಮಾಡುತ್ತಿದೆ. ಡ್ರೋನ್ ಕ್ಯಾಮೆರಾಗಳ ನೆರವಿನಿಂದಲೂ ಶೋಧ ಕಾರ್ಯ ನಡೆಸುತ್ತಿದೆ. ಈಗಾಗಲೇ ಚಿರತೆ ಓಡಾಡಿರುವ ಕಡೆಗಳಲ್ಲಿ ಬೋನು ಇಡಲಾಗಿದ್ದು. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಮೈಸೂರಿನಿಂದ ಚಿರತೆ ಹಿಡಿಯಲು ತಂಡವೂ ಆಗಮಿಸಿದೆ. ಮುಖ್ಯಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಅವರೂ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಸಿಸಿಎಫ್, ಡಿಸಿಎಫ್. ನೇತೃತ್ವದ 70 ಜನರ ತಂಡ ಚಿರತೆ ಸೆರೆಗೆ ಪ್ರಯತ್ನಿಸುತ್ತಿದೆ. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿದು ಕಾಡಿಗೆ ಮರಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಆತಂಕ ಬೇಡ ಮುನ್ನೆಚ್ಚರಿಕೆ ಅಗತ್ಯ: ವನ್ಯ ಜೀವಿಗಳು ಬೆಂಗಳೂರಿನಂತಹ ನಗರ ಪ್ರದೇಶಕ್ಕೆ ಬಂದಾಗ ಆತಂಕ ಸಹಜ. ಆದರೂ ನಾಗರಿಕರು ಹೆಚ್ಚು ಗಾಬರಿ ಆಗುವುದು ಬೇಡ. ಮುನ್ನೆಚ್ಚರಿಕೆ ಅಗತ್ಯ. ಚಿರತೆ ಕಾಣಿಸಿಕೊಂಡಿರುವ ಸುತ್ತಮುತ್ತಲ ಪ್ರದೇಶದಲ್ಲಿ ನಿವಾಸಿಗಳು ತಮ್ಮ ಮಕ್ಕಳನ್ನು ಒಂಟಿಯಾಗಿ ರಸ್ತೆಯಲ್ಲಿ ಆಟವಾಡಲು ಬಿಡಬಾರದು. ರಾತ್ರಿಯ ವೇಳೆ ಜನ ಒಂಟಿಯಾಗಿ ಸಂಚರಿಸಬಾರದು. ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕೂಡ್ಲು ಗೇಟ್, ಇಬ್ಬಲೂರು ಸುತ್ತಮುತ್ತಲ ಪ್ರದೇಶದಲ್ಲಿನ ಮನೆ, ಸಮುಚ್ಚಯಗಳ ಜನರಿಗೆ ಅಧಿಕಾರಿಗಳು ಇಂತಹ ಮುನ್ನೆಚ್ಚರಿಕೆ ಸೂಚನೆ ನೀಡಿದ್ದಾರೆ, ಮೈಕ್ ಗಳಲ್ಲಿ ಪ್ರಕಟಣೆ ನೀಡಿದ್ದಾರೆ. ಮಾಧ್ಯಮಗಳೂ ಎಚ್ಚರಿಕೆ ನೀಡುತ್ತಿವೆ ಎಂದರು.
ಬಹುಶಃ ಈ ಚಿರತೆ ಬನ್ನೇರುಘಟ್ಟ ಕಾಡಿನಿಂದ ಬಂದಿರುವ ಸಾಧ್ಯತೆ ಇದೆ. ಚಿರತೆಯನ್ನು ಆದಷ್ಟು ಬೇಗ ಹಿಡಿದು ಅದರ ದೇಹಸ್ಥಿತಿ, ಆರೋಗ್ಯ ಪರಿಶೀಲಿಸಿ ನಂತರ ಕಾಡಿಗೆ ಬಿಡಬೇಕೋ, ವನ್ಯಜೀವಿ ಪರಿಪಾಲನಾ ಕೇಂದ್ರಕ್ಕೆ ಬಿಡಬೇಕೋ ಎಂಬ ಬಗ್ಗೆ ಅಧಿಕಾರಿಗಳು, ವೈದ್ಯರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಅಧಿಕಾರಿಗಳಿಗೆ ಸೂಚನೆ : ಈ ಮಧ್ಯೆ ಅರಣ್ಯ ಭವನದಲ್ಲಿಂದು ಸಂಜೆ ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 156ನೇ ಸಾಮಾನ್ಯ ಆಡಳಿತ ಮಂಡಳಿ ಸಭೆಯ ನಂತರ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವರು ಚಿರತೆ ಸೆರೆ ಹಿಡಿಯಲು ಎಲ್ಲ ಸಾಧ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.

More News

You cannot copy content of this page