ಹೈದರಾಬಾದ್ : ಭೀಕರ ಭೂಕಂಪ ಸಂಭವಿಸಿರುವ ಜಪಾನ್ ನಿಂದ ಮಂಗಳವಾರ ಬೆಳಗ್ಗೆ ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ಭಾರತಕ್ಕೆ ಕ್ಷೇಮವಾಗಿ ಹಿಂದಿರುಗಿದ್ದಾರೆ. ಸರಣಿ ಭೂಕಂಪದಿಂದ ನಲುಗಿರುವ ಜಪಾನ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ತಮ್ಮ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಜಪಾನ್ ನಿಂದ ಇಂದು ಮನೆಗೆ ಹಿಂದಿರುಗಿದ್ದೇನೆ. ಅಲ್ಲಿ ಭೂಕಂಪ ಸಂಭವಿಸುವುದರಿಂದ ಬಹಳ ಆಘಾತಕ್ಕೊಳಗಾಗಿದ್ದೇನೆ. ಕಳೆದ ಒಂದು ವಾರ ಪೂರ್ತಿ ಅಲ್ಲಿಯೇ ಕಳೆದಿದ್ದೆ. ಭೂಕಂಪನದಿಂದ ಸಂಕಷ್ಟಕ್ಕೀಡಾಗಿರುವ ಪ್ರತಿಯೊಬ್ಬರಿಗೂ ನನ್ನ ಹೃದಯ ಮಿಡಿಯುತ್ತಿದೆ. ಅಲ್ಲಿನ ಜನರ ಔದಾರ್ಯಕ್ಕೆ ಕೃತಜ್ಞನಾಗಿದ್ದೇನೆ. ಜಪಾನ್ ಶೀಘ್ರದಲ್ಲಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಸೋಮವಾರ ಜಪಾನ್ ನ ಪಶ್ಚಿಮಭಾಗದಲ್ಲಿ ಭೂಕಂಪ ಸಂಭವಿಸಿತ್ತು. ಈ ಘಟನೆಯಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಹಾಗೆಯೇ ಅನೇಕ ಪ್ರದೇಶಗಳಲ್ಲಿ ಮತ್ತಷ್ಟು ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆಗಳಿವೆ ಎಂದು ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ತಮ್ಮ ಮನೆಗಳಿಂದ ಹೊರಗಿರುವಂತೆ ಸೂಚನೆ ನೀಡಲಾಗಿದೆ.