ಹುಬ್ಬಳ್ಳಿ-ಗದಗ: ಯಶ್ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಷದಿಂದ 3 ಜನ ಅಭಿಮಾನಿಗಳ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆದಿದೆ.

ಹನಮಂತ ಹರಿಜನ (24), ಮುರಳಿ ನಡವಿನಮನಿ (20), ನವೀನ ಗಾಜಿ (20) ಮೃತ ದುರ್ದೈವಿಗಳು. ಘಟನೆಯಲ್ಲಿ ಇನ್ನೂ 3 ಜನಕ್ಕೆ ಗಾಯಾಗಳಾಗಿದ್ದು, ಲಕ್ಷ್ಮೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 25 ಅಡಿ ಎತ್ತರದ ಕಟೌಟ್ ಕಟ್ಟುವ ವೇಳೆ ವಿದ್ಯುತ್ ತಂತಿ ಸ್ಪರ್ಷ ವಾಗಿ ಮಧ್ಯರಾತ್ರಿ ದುರ್ಘಟನೆ ನಡೆದಿದ್ದು,
ಗದಗ ಜಿಲ್ಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕರ ಸಾವಿನ ಬೆನ್ನಲ್ಲೇ ಲಕ್ಷ್ಮೇಶ್ವರ ತಾಲೂಕ ಆಸ್ಪತ್ರೆಗೆ ಶಾಸಕ ಡಾ ಚಂದ್ರು ಲಮಾಣಿ ಭೇಟಿ ನೀಡಿ, ಮೃತ ಕುಟುಂಬಕ್ಕೆ ಸಾಂತ್ವನ ನೀಡಿದರು. ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದು ಮೃತ ಹಾಗೂ ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡ್ತೆನಿ ಎಂದರು.

ಲಕ್ಷ್ಮೇಶ್ವರ ತಾಲೂಕ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ಬಿ.ಎಸ್ ನೇಮಗೌಡ ಭೇಟಿ ನೀಡಿ, ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವಿದ್ಯುತ್ ಕಂಬ ಅಳವಡಿಕೆ ಬಗ್ಗೆ ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ಹೇಳಿ, ವಿದ್ಯುತ್ ಕಂಬ ಅವೈಜ್ಞಾನಿಕವಾಗಿದ್ರೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.