ಹುಬ್ಬಳ್ಳಿ : ಪುಲ್ ವಾಮಾ ದಾಳಿ ಪ್ರಕರಣದಲ್ಲಿ ಕೇವಲ ಐವರ ಹೆಸರು ಮಾತ್ರ ಚಾರ್ಜ್ ಶೀಟ್ ನಲ್ಲಿದೆ, ಉಳಿದ ಹದಿನೈದು ಜನರು ಏನಾದರು. ಹಾಗೆಯೇ ದೇಶದೊಳಗೆ ಒಂದಲ್ಲಾ ಎರಡಲ್ಲ ಮೂನ್ನೂರು ಕೆಜೆ ಆರ್ ಡಿ ಎಕ್ಸ್ ಬಂತು, ಇದಕ್ಕೆ ಕಾರಣ ಯಾರು, ಅಂದು ಯಾಕೆ ಇವರು ಪ್ರಧಾನಿಯವರ ರಾಜೀನಾಮೆ ಕೇಳಿರಲಿಲ್ಲ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮಂತ್ರಿ ಅವರನ್ನು ರಾಜೀನಾಮೆ ಕೇಳಬೇಕಾಗಿತ್ತು, ಹೋಗಲಿ ರಕ್ಷಣಾ ಸಚಿವರನ್ನಾದರು ಕೇಳಬಹುದಿತ್ತು, ಪತ್ರಕರ್ತರಾದವರು ನೀವು ಮೊದಲು ಅವರನ್ನ ಕೇಳಿ ಎಂದು ಸಂತೋಷ್ ಲಾಡ್ ಮಾಧ್ಯಮದವರಿಗೆ ತಾಕೀತು ಮಾಡಿದರು.
ಇದರ ಜೊತೆಗೆ ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು, ಈ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಇದರ ಬಗ್ಗೆ ಬಿಜೆಪಿ ಅವರು ಯಾಕೆ ಹೋರಾಟ ಮಾಡಿಲ್ಲ, ಈ ಪ್ರಶ್ನೆಯನ್ನ ಬಿಜೆಪಿಯವರಿಗೆ ಕೇಳಿ ಎಂದು ಸಚಿವರು ಪತ್ರಕರ್ತರಿಗೆ ತಿಳಿಸಿದರು.
ಅವರು ಅಂದು ಬೀದಿಗಳಿದು ಹೋರಾಟ ಮಾಡಬಹುದಿತ್ತು, ಅದರ ಬಗ್ಗೆ ಸಹ ಅಧಿವೇಶನದಲ್ಲಿ ಕೂಗಬಹುದಿತ್ತು, ಕೇಸರಿ ಹಾಕಿಕೊಂಡು ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದರೆ ನಡೆಯುತ್ತಾ ಎಂದು ಪ್ರಶ್ನಿಸಿದರು. ಈ ದೇಶದಲ್ಲಿ 10 ವರ್ಷಗಳಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಿದ ಎಷ್ಟು ಪ್ರಕರಣಗಳಿವೆ, ಎಷ್ಟು ಜನರನ್ನು ಬಂಧನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಆದರೆ ಈ ಪ್ರಕರಣದಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲ್ಲ, ಯಾರ ಪರವಾಗಿಯೂ ಇಲ್ಲ, ಯಾರೇ ಮಾಡಿದರೆ ಅವರ ಮೇಲೆ ಕ್ರಮಕೈಗೊಳ್ಳುತ್ತೇವೆ, ತನಿಖೆ ನಡೆಯುತ್ತಿರುವಾಗಲೇ ಸರ್ಕಾರ ವಜಾ ಮಾಡಿ ಎಂದರೆ ಹೇಗೆ ಎಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ಜಾತಿ ಗಣತಿ ವರದಿ ಜಾರಿಗೆ ಬಿಜೆಪಿ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ಯಾರು ನೋಡಿದ್ದಾರೆ, ಅದನ್ನು ನೋಡುವ ಮುಂಚೆ ಕೇಳುವುದು ಸರಿಯೇ, ವರದಿ ಸಲ್ಲಿಕೆ ಆಗಿದೆ, ವರದಿ ಎಲ್ಲಿದೆ, ಸರ್ಕಾರಕ್ಕೆ ಬರುವ ಮುನ್ನ ಟೇಬಲ್ ಆಗಿ ಬರಬೇಕು, ರಾಜ್ಯದ ಜನತೆಗೆ ಗೊತ್ತಾಗಬೇಕು ಎಂದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣ
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳು ಉತ್ತರಿಸಿದ್ದಾರೆ. ಯಾರೇ ತಪ್ಪು ಮಾಡಲಿ ಕ್ರಮ ಗ್ಯಾರಂಟಿ ಎಂದಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಈಗಾಗಲೇ ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ಎಂದು ತೆಗೆದುಕೊಂಡಿದೆ, ತನಿಖೆ ನಡೆತಾ ಇದೆ ಎಂದರು.