BASAVARAJA BOMMAI: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಅಯೋಮಯ:ಬಸವರಾಜ ಬೊಮ್ಮಾಯಿ

ಹಾವೇರಿ: ಬಿಜೆಪಿ ಅವಧಿಯಲ್ಲಿಯೇ ಕರ್ನಾಟಕ ಆರ್ಥಿಕವಾಗಿ ಸದೃಡ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕರ್ನಾಟಕದ ಆರ್ಥಿಕ ಸ್ಥಿತಿ ಅಯೋಮಯ ಆಗಿದೆ. ಖಜಾನೆಯೂ ಖಾಲಿಯಾಗಿದೆ. ಬರಗಾಲದಲ್ಲಿಯೂ ಸಹ ಇವರು ಹಣ ಬಿಡುಗಡೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಣೆಬೆನ್ನೂರು ತಾಲೂಕು ಮಾಕನೂರ್ ಬಳಿ ಚುನಾವಣಾ ಪ್ರಚಾರ ಸಭೆ ನಡೆಸಿದ ಅವರು, ಬಿಜೆಪಿ ಅಂದರೆ ಭಾವನೆ, ಕಾಂಗ್ರೆಸ್ ಅಂದರೆ ಬದುಕು ಎಂಬ ಸಚಿವ ಹೆಚ್ ಕೆ ಪಾಟೀಲ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ಅವರ ಹೇಳಿದ್ದಕ್ಕೆಲ್ಲಾ ಉತ್ತರ ಕೊಡುವ ಅಗತ್ಯ ಇಲ್ಲ. ಜನರಿಗೆ ಗೊತ್ತಿದೆ ಯಾವುದು ಬದುಕು ಯಾವುದು ಭಾವನೆ ಅಂತ ಎಂದು ಹೇಳಿದರು.
ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಆಗಿರುವುದು ಬಿಜೆಪಿ ಕಾಲದಲ್ಲಿ ತುಳಿತಕ್ಕೆ ಒಳಗಾಗಿರುವವರಿಗಾಗಿ ವಿಶೇಷ ಕಾರ್ಯಕ್ರಮ ಮಾಡಿದ್ದು ಯಡಿಯೂರಪ್ಪನವರು. ಸಾಮಾಜಿಕ ನ್ಯಾಯ ಆರ್ಥಿಕ ಬೆಳವಣಿಗೆ ಇವೆರಡೂ ಬದುಕಿಗೆ ಸಂಬಂಧ ಪಟ್ಟವುಗಳು ಕುಡಿಯುವ ನೀರಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ
ಬರಿ ಹೇಳಿಕೆಗಳ ಮೂಲಕ, ಮೀಟಿಂಗ್ ಗಳ ಮೂಲಕ ಬರಗಾಲ ನೀಗಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸವರಾಜ ಬೊಮ್ಮಾಯಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಚುನಾವಣೆ ಬಂದರೂ ಏಕಾಂಗಿಯಾಗೇ ಇರುತ್ತೇನೆ ನಾನೊಬ್ಬನೇ ಸಾಕು ಎಂದು ತಿರುಗೇಟು ನೀಡಿದರು.
ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹಾಲ್ ಗಿಂತ ಸ್ಟೇಜ್ ಮೇಲೆನೇ ಜನ ಜಾಸ್ತಿ ಇದ್ದರು. ನಿನ್ನೆ ಕಾಂಗ್ರೆಸ್ ನಾಯಕರು ಸ್ಟೇಜ್ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡುವ ಪರಿಸ್ಥಿತಿ ಬಂತು. ಆದರೆ, ನಿಜವಾಗಿಯೂ ಅವರಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಶುದ್ದೀಕರಣ ಮಾಡುತ್ತೆನೆ ಎಂಬ ಮಾಜಿ ಸಿಎಂ ಸದಾನಂದಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದಾನಂದಗೌಡರು ಹಿರಿಯರಿದ್ದಾರೆ. ಅವರು ಅವರದೇ ಆದ ನಿಲುವು ತೆಗೆದುಕೊಂಡಿದ್ದಾರೆ. ಅವರಿಗೆ ಪಕ್ಷದ ಮೇಲಿನ ಬದ್ದತೆ ಹಾಗೂ ಅಭಿಮಾನ ಎಂದೂ ಕಡಿಮೆ ಆಗುವುದಿಲ್ಲ ಎಂದರು.
ತಂದೆ ಮಕ್ಕಳಿಂದ ಬಿಜೆಪಿ ಉಳಿಸುತ್ತೇವೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಶ್ವರಪ್ಪನವರು ಭಾವನಾತ್ಮಕವಾಗಿ ಮಾತಾಡಿದ್ದಾರೆ. ಕೆಲವೇ ದಿನಗಳಲ್ಲಿ ನಮ್ಮ ವರಿಷ್ಟರು ಗಂಭೀರವಾಗಿ ಅವರೊಂದಿಗೆ ಮಾತನಾಡುತ್ತಾರೆ ಎಂದರು.
ಇದೇ ವೇಳೆ, ನಾಳೆ ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ಇದೆ. ನಾಳೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಹೇಳಿದರು.

More News

You cannot copy content of this page