ಕಲಬುರಗಿ : ಪ್ರತಿದಿನ, ಪ್ರತಿಕ್ಷಣ ಹಿಂದುತ್ವ, ಹಿಂದುತ್ವ ಎಂದು ಹೇಳುವ ಬಿಜೆಪಿ ನಾಯಕರೇ ಹಣೆಗೆ ಕುಂಕುಮ ಇಡಲು ನಿರಾಕರಣೆ ಮಾಡಿದ ಘಟನೆ ಇಂದು ಜರುಗಿದೆ.
ವಿಪಕ್ಷ ನಾಯಕ ಆರ್ ಅಶೋಕ್ ಅವರು ತಮ್ಮ ಹಣೆಗೆ ಕುಂಕುಮ ಹಾಕಲು ನಿರಾಕರಿಸಿದ್ದಾರೆ. ಹಾಗೆಯೇ ಕುಂಕುಮ ಇಡಲು ಬಂದ ವಯೋವೃದ್ದರ ಕೈ ತಳ್ಳಿದ್ದಾರೆ. ಆದರೆ, ಅವರ ಬಳಿಯಿಂದ ಶಾಲು ಮಾತ್ರ ಹೊದಿಸಿಕೊಂಡಿರುವ ಘಟನೆ ಕಲಬುರಗಿಯಲ್ಲಿ ಜರುಗಿದೆ.

ಕಲಬುರಗಿಯ ಚಿಂಚೋಳಿ ತಾಲೂಕಿನ ಸುಲೆಪೇಟ್ ನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಇಡಲು ಮುಂದಾದಾಗ ಅದನ್ನು ಅವರು ನಿರಾಕರಿಸಿದ್ದಾರೆ.
ಕೇವಲ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ , ಕುಂಕುಮ ಹಾಕಲ್ಲ ಎಂಬಿತ್ಯಾದಿ ಟೀಕೆಗಳನ್ನು ಬಿಜೆಪಿ ನಾಯಕರು ಮಾಡುತ್ತಿರುತ್ತಾರೆ. ಆದರೆ, ವಿಪಕ್ಷ ನಾಯಕ ಆರ್ ಅಶೋಕ್ ಅವರ ನಡೆಗೆ ಇದೀಗ ಬಿಜೆಪಿ ನಾಯಕರು ಏನು ಹೇಳುತ್ತಾರೆ ಎಂದು ಕಾದುನೋಡಬೇಕಾಗಿದೆ.
ಬಿಜೆಪಿ ಕಚೇರಿಗೆ ಆಗಮಿಸಿದಾಗ ಒಂದು ಹಾರವನ್ನು ಹಿರಿಯ ಮುಖಂಡ ಡಾ. ವಿಶ್ವನಾಥ್ ಪವಾಲ್ ಅವರಿಗೆ ಹಾಕಿದರು. ನಂತರ ಪವಾರ್ ಅವರು ಕುಂಕುಮ ಇಡಲು ಬಂದಾಗ ಅದನ್ನು ನಿರಾಕರಿಸಿದರು. ಇದೀಗ ಈ ವಿಚಾರ ವ್ಯಾಪಕ ಚರ್ಚೆಯಾಗುತ್ತಿದ್ದು, ಜನಸಾಮಾನ್ಯರಿಗೆ ಹೇಳುವುದು ಒಂದು ತಾವು ಮಾಡುವುದು ಇನ್ನೊಂದು ಎಂಬತಾಗಿದೆ ಪಬಿಜೆಪಿ ನಾಯಕರ ನಡೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಈ ಹಿಂದೆ ಸದನದಲ್ಲಿ ತಮ್ಮನ್ನು ತಾವು ಹೊಗಳುವ ಭರದಲ್ಲಿ ಬಿಜೆಪಿಯನ್ನು ಸದಾ ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡಿದ್ದೆ ಎಂದು ಹೇಳಿದ್ದರು. ನಾನು ಗೃಹ ಸಚಿವನಾಗಿದ್ದಾಗ ಪಬ್ ನಲ್ಲಿ ನಡೆದ ಗಲಾಟೆ ಸಂಬಂಧ ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿದ್ದೆ ಎಂದು ಹೇಳಿದ್ದು, ಅನೇಕ ಹಿಂದೂ ಸಂಘಟನೆಗಳ ಕೆಂಗೆಣ್ಣಿಗೆ ಗುರಿಯಾಗಿದ್ದರು. ನಂತರ ಅವರು ಬಜರಂಗದಳದ ಸಂಘಟನೆಯ ಕ್ಷಮೆ ಕೇಳಿದ್ದರು.
ಹಾಗೆಯೇ ಇತ್ತೀಚೆಗೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸ್ ಮಾಡಲು ಆಕ್ಷೇಪಿಸಿ ಅನ್ಯ ಸಮುದಾಯದವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ತೇಜಸ್ವಿ ಸೂರ್ಯ ಹಿಂದೂಪರ ಸಂಘಟನೆಗಳೊಂದಿಗೆ ಭಾರೀ ಪ್ರತಿಭಟನೆ ನಡೆಸಿದ್ದರು.
ನಂತರ ಅವರದೇ ಪಕ್ಷ ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಇದು ಹನುಮಾನ್ ಚಾಲೀಸಾ ಸಂಬಂಧ ನಡೆದ ಘರ್ಷಣೆಯಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದರಿಂದ ಅಸಲಿ ಕಥೆ ಬಯಲಾಗಿದನ್ನು ಇಲ್ಲಿ ಸ್ಮರಿಸಬಹುದು.