ಹುಬ್ಬಳ್ಳಿ:ಪ್ರಧಾನಮಂತ್ರಿ ಮೋದಿಯವರ ಗ್ಯಾರಂಟಿ ಮುಂದೆ ಕಾಂಗ್ರೆಸ್ಸಿನವರು ಕೊಟ್ಟಿರುವ ಗ್ಯಾರಂಟಿಗಳು ನೆಲಕಚ್ಚುತ್ತವೆ. ಮೋದಿಯವರ ಗ್ಯಾರಂಟಿಯಿಂದ ಕಾಂಗ್ರೆಸ್ಸಿನ ಭರವಸೆ ನೀರಲ್ಲಿ ಬೂದಿ ಹಾಕಿದಂತಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿಯಲ್ಲಿ ಎಸ್.ಟಿ ಮೋರ್ಚಾ ಸಮಾವೇಶಕ್ಕೆ ಆಗಮಿಸಿದ ವೇಳೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾವುದೇ ಸರ್ವೇಗಳಿಂದಲೂ ಕೂಡ ಫಲಿತಾಂಶ ನಿಖರವಾಗಿ ಬರುವುದಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಯಾವುದೇ ರೀತಿಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದಿಲ್ಲ. ಕಾಂಗ್ರೆಸ್ಸಿನವರು ಗ್ಯಾರಂಟಿಗಳು ಮತಗಳಾಗಿ ಪರಿವರ್ತನೆ ಆಗುತ್ತವೆ ಎಂದುಕೊಂಡಿದ್ದಾರೆ. ಆದರೆ ಮೋದಿಯವರ ನಾಯಕತ್ವವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಹೆಚ್ಚಿನ ಸೀಟ್ ಗೆಲ್ಲುತ್ತದೆ ಎಂದರು.
ಮೋದಿಯವರು ಪ್ರಧಾನಮಂತ್ರಿಯಲ್ಲ ಪ್ರಚಾರ ಮಂತ್ರಿ ಎಂಬುವಂತ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಿಯಾಂಕಾ ಖರ್ಗೆ ಮಾತಿನಲ್ಲಿ ಜಾಣ ಇದ್ದಾನೆ. ಒಳ್ಳೆಯದರಲ್ಲಿ ಜಾಣ ಅಲ್ಲ ಎಲ್ಲ ಕೆಟ್ಟಗುಣಗಳನ್ನು ಮೈಗೂಡಿಸಿಕೊಂಡಿರುವ ಒಬ್ಬ ದುಷ್ಟಗುಣಗಳ ಜಾಣ ಎಂದು ಕಿಡಿ ಕಾರಿದರು..
ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾವಂತೂ ಗಣಿಗಾರಿಕೆ ಶಾಲೆಯಲ್ಲಿ ಓದಿಲ್ಲ. ಕೋರ್ಟ್, ನ್ಯಾಯಾಂಗ ವ್ಯವಸ್ಥೆ ತೀರ್ಮಾನ ಮಾಡದೇ ಅಪರಾಧಿ ಎಂಬುವುದು ತಪ್ಪು. ಗಾಲಿ ಜನಾರ್ದನ ರೆಡ್ಡಿ ಬಗ್ಗೆ ಮಾತನಾಡುವ ಇವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್ ಮೇಲೆ ಆರೋಪ ಹಾಗೂ ಅಲಿಗೇಶನ್ ಗಳಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.