HD Kumaraswamy: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನನ್ನ , ದೇವೇಗೌಡ ಪಾತ್ರ ಇಲ್ಲ- ಕುಮಾರಸ್ವಾಮಿ

ಸಿಂಧನೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತ ಮಾಜಿ ಸಿಎಂ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸುದೀರ್ಘವಾದ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಇಡೀ ಪ್ರಕರಣದಲ್ಲಿ ದೇವೇಗೌಡರದ್ದಾಗಲೀ , ನನ್ನ ಪಾತ್ರವಾಗಲಿ ಏನು ಇಲ್ಲ. ನೆಲದ ಕಾನೂನಿನಂತೆ ತನಿಖೆ ನಡೆಯಲಿ. ಸೂಕ್ತ ತನಿಖೆಯಾಗಲಿ. ತನಿಖೆಯಲ್ಲಿ ತಪ್ಪಿತಸ್ಥ ಎಂದು ಕಂಡುಬಂದರೇ ಶಿಕ್ಷೆಯಾಗಲಿ ಎಂದು ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ.
ಇಡೀ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಡೆಯನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಮಾಧ್ಯಮ ಮಿತ್ರರು ದಿನಬೆಳಗಾದರೆ ನನ್ನ ಪ್ರತಿಕ್ರಿಯೆಗೆ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪದೇ ಪದೇ ಪ್ರಧಾನಿ ಮೋದಿ ಅವರನ್ನು ಈ ಪ್ರಕರಣದಲ್ಲಿ ಎಳೆದು ತರುವ ಪ್ರಯತ್ನವಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಎಸ್ಐಟಿ ವಿಚಾರಣೆಗೆ ಹಾಜರಾಗಲು ಎರಡು ದಿನಗಳ ಕಾಲಾವಕಾಶ ನೀಡಿ ಎಂದು ರೇವಣ್ಣ ಮನವಿಮಾಡಿದ್ದಾರೆ. ಹೀಗಿದ್ದರೂ ಹತ್ತು ನೋಟಿಸ್‌ಗಳನ್ನು ಅವರಿಗೆ ಜಾರಿ ಮಾಡಲಾಗಿದೆ. ಈ ಮೂಲಕ ಸಮನ್ಸ್‌ಗಿರುವ ಗೌರವ ಹಾಳುಮಾಡಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿಮಾಡಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜ್ಯ ಸರ್ಕಾರ ಪ್ರಚಾರಕ್ಕಾಗಿ ಬಳಸುವ ಯತ್ನ ನಡೆಸುತ್ತಿದೆ. ತನಿಖೆಯ ಹಾದಿ ತಪ್ಪಿಸುವ ಯತ್ನ ಕೂಡ ನಡೆದಿದೆ. ಕೆಲವರು ಕುಮಾರಸ್ವಾಮಿಯೇ ಈ ಕ್ಯಾಸೆಟ್ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೂಡ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ತಂದೆ ದೇವೇಗೌಡರಿಗೆ ಆತ್ಮ ಧೈರ್ಯ ತುಂಬಲು ಅವರ ಮನೆೆಗೆ ಭೇಟಿ ನೀಡಿದ್ದೆ. ಎರಡು ದಿನಗಳ ಕಾಲ ಅವರ ಜೊತೆಯಲ್ಲಿ ಇದ್ದ. ನಾವು ಬೆಳೆದು ಬಂದ ಸಂಸ್ಕೃತಿ ಆ ರೀತಿ ಇದೆ. ತಂದೆ- ತಾಯಿ ಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಬೇಕು. ಇದು ಬೆಳೆದು ಬಂದಿರುವ ರೀತಿ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ರೇಪ್ ಮಾಡಿದ್ದಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಹುಲ್‌ಗೆ ಈ ಮಾಹಿತಿ ನೀಡಿದವರು ಯಾರು. ನೀವು ತಾನೆ.. ಎಂದು ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ನಿಮಗೆ ಧೈರ್ಯ ಇದ್ದರೆ ರಾಹುಲ್ ಗಾಂಧಿಗೆ ಎಸ್ಐಟಿ ಮೂಲಕ ನೋಟಿಸ್ ಜಾರಿ ಮಾಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೂಡ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಂತ್ರಸ್ಥೆಯರಿಗೆ ನ್ಯಾಯ ನೀಡುವ ಕಾಳಜಿ ಇಲ್ಲ. ನಿಮಗೆ ಬೇಕಿರುವುದು ಕೇವಲ ಪ್ರಚಾರ ಮಾತ್ರ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ
ಈ ಮಧ್ಯೆ ಮುಂಜಾನೆ ನಿರೀಕ್ಷಣಾ ಜಾಮೀನು ಅರ್ಜಿ ಹಿಂದಕ್ಕೆ ಪಡೆದಿದ್ದ ಹೆಚ್ ಡಿ ರೇವಣ್ಣ , ಇದೀಗ ಜನ ಪ್ರತಿನಿಧಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅರ್ಜಿ ವಿಚಾರಣೆ ನಾಳೆೆಗೆ ಮುಂದೂಡಿದೆ.

More News

You cannot copy content of this page