ಹಾವೇರಿ: ದೇಶದ ಎಲ್ಲ ಸಮುದಾಯಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರಿದಾಗ ದೇಶ ಅಭಿವೃದ್ಧಿ ಆಗುತ್ತದೆ. ಸಣ್ಣ ಸಮುದಾಯ ಹಿಂದುಳಿದರೆ ದೇಶದ ಅಭಿವೃದ್ಧಿ ಕುಂಟಿತಕ್ಕೆ ಕಾರಣವಾಗುತ್ತದೆ ಎಂದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಜಿಲ್ಲೆಯ ಮಾದಿಗ ಸಮಾಜದಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ದಲಿತ ಮಾದರ ಸಮುದಾಯದ ಮತಗಳು ಸಹಕಾರಿಯಾಗಿದೆ. ಮತ ಹಾಕಿದವರು ದೊಡ್ಡವರು. ಅದಕ್ಕೆ ಮತದಾನ ಅಂತಾರೆ. ಹಾಗಾಗಿ, ಈ ಸನ್ಮಾನ ನಿಮಗೆ ಸಲ್ಲುತ್ತದೆ ಎಂದು ಹೇಳಿದರು.
ಚುನಾವಣೆ ಬರುತ್ತವೆ ಹೋಗುತ್ತವೆ. ನಮ್ಮ ಬದುಕು ನಿರಂತರವಾಗಿ ಸಾಗಬೇಕು. ಸ್ವತಂತ್ರ ಪೂರ್ವ ವ್ಯವಸ್ಥೆ ಏನಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಿದೆ. ಸಾಮಾಜಿಕ ಬದಲಾವಣೆ ಆಗಬೇಕು. ದೇಶದ ಎಲ್ಲ ಸಮುದಾಯಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದುವರಿದಾಗ ದೇಶ ಅಭಿವೃದ್ಧಿ ಆಗುತ್ತದೆ.
ಸಣ್ಣ ಸಮುದಾಯ ಹಿಂದುಳಿದರೆ ದೇಶದ ಅಭಿವೃದ್ಧಿ ಕುಂಟಿತಕ್ಕೆ ಕಾರಣವಾಗುತ್ತದೆ. ಜಾತಿ ವ್ಯವಸ್ಥೆ ನಾವೇ ಜಟಿಲವಾಗಿ ಮಾಡಿಕೊಂಡಿರುವ ಸಮಸ್ಯೆ ಆಗಿದೆ. ನಮ್ಮ ಮನಸ್ಸು ಸಂಕುತವಾಗಿ ಯೋಚಿಸಿದಾಗ ಹೀಗೆ ಆಗುತ್ತದೆ ಎಂದರು.
ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು. ಯಾವುದಾದರೂ ಕೆಲಸ ಕೊಟ್ಟರೆ ಅಚ್ಚುಕಟ್ಟಾಗಿ ಮಾಡುವ ಸಾಮರ್ಥ್ಯ ಈ ಸಮುದಾಯಕ್ಕೆ ಇದೆ. ಭಾರತ ಬರಗಾಲ ಪೀಡಿತ ದೇಶವಾಗಿ ಬೇರೆ ದೇಶದ ಬಳಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿತ್ತು. ಆಗ ಕೃಷಿ ಸಚಿವರಾಗಿ ಹಸಿರು ಕ್ರಾಂತಿಯ ಮೂಲಕ ಆಮೂಲಾಗ್ರ ಬದಲಾವಣೆ ತಂದವರು ಬಾಬು ಜಗಜೀವನರಾಂ ಎಂದು ಹೇಳಿದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಸಮುದಾಯಕ್ಕೆ ಗೌರವಯುತವಾದ ಬದುಕು ಕಟ್ಟಿಕೊಡಲು, ಮಕ್ಕಳಿಗೆ ಶಿಕ್ಷಣ ಕೊಡಲು ನಿರಂತರವಾಗಿ ಪ್ರಯತ್ನ ಮಾಡುತ್ತೇನೆ. ನೀವು ಇನ್ನು ಮುಂದೆ ನಮ್ಮೊಂದಿಗೆ ಯಾರಿದ್ದಾರೆ ಎಂಬ ಹತಾಶ ಮನೋಭಾವನೆ ಬಿಡಿ. ನಿಮ್ಮ ಸಹೋದರ ಸಂಸದರಾಗಿ ದೆಹಲಿಗೆ ಹೋಗಿದ್ದಾರೆ. ವೇದಿಕೆ ಮೇಲೆ ಕುಳಿತವರು ಎಲ್ಲರೂ ಒಂದಾಗಿ ಆಗ ಎದುರಿಗೆ ಇರುವವರೆಲ್ಲರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕಿವಿಮಾತು ಹೇಳಿದರು.
ಇತರ ಎಲ್ಲ ಸಮಾಜವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕು. ಭವಿಷ್ಯಕ್ಕಾಗಿ ಒಗ್ಗಟ್ಟಾಗಿ ದುಡಿಯೋಣ. ನಮ್ಮ ಬದುಕಿನಂತೆ ನಮ್ಮ ಮಕ್ಕಳಾಗಬಾರದು. ಉಜ್ವಲ ಭವಿಷ್ಯ ಹೊಂದಬೇಕು ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಡಿ.ಎಸ್.ಮಾಳಗಿ, ಗವಿಸಿದ್ದಪ್ಪ ದ್ಯಾಮಣ್ಣವರ, ಪರಮೇಶಪ್ಪ ಮೇಗಳಮನಿ, ಚಂದ್ರಪ್ಪ ಹರಿಜನ, ಮಲ್ಲೇಶಪ್ಪ ಹರಿಜನ, ಹೊನ್ನಪ್ಪ ತಗಡಿನಮನಿ, ಪ್ರಕಾಶ ಪೂಜಾರ ಹಾಗೂ ಮಾಜಿ ಶಾಸಕರಾದಶಿವರಾಜ ಸಜ್ಜನ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.