ಹಾವೇರಿ: ಕಾಂಗ್ರೆಸ್ ಸರ್ಕಾರದ ಖಜಾನೆಯ ದುರುಪಯೋಗ, ಅಧಿಕಾರದ ದುರುಪಯೋಗ, ಅಪಪ್ರಚಾರದ ನಡುವೆಯೂ ಮತದಾರರು ದೇಶದ ಸುಭದ್ರತೆಗಾಗಿ ಮತ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಪಟ್ಟಣದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಏರ್ಪಡಿಸಿದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ, ಮತದಾರರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕು. ಈ ಸನ್ಮಾನ, ಅಭಿನಂದನೆ ನನಗಲ್ಲಾ, ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಸೇರಬೇಕು. ಮತದಾರರು ಮೇ 7ರಂದೇ ಮತ ದಾನ ಮಾಡುವ ಮೂಲಕ ಕೋಟಿ ಕೋಟಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಈ ಚುನಾವಣೆ ಬಹಳ ವಿಭಿನ್ನವಾಗಿತ್ತು. ಮತದಾರರ ಪ್ರಬುದ್ಧತೆ ಪ್ರಶ್ನಿಸುವ ಚುನಾವಣೆ ಆಗಿತ್ತು. ಈ ಚುನಾವಣೆಯಲ್ಲಿ ಯಾರು ಗೆದ್ದಿದ್ದಾರೆ, ಯಾರು ಸೋತಿದ್ದಾರೆ ಎಂದು ವಿಶ್ಲೇಷಣೆ ಮಾಡಿದರೆ ಮತದಾರರು ಗೆದ್ದಿದ್ದಾರೆ. ಕಾಂಗ್ರೆಸ್ ಬಹಳ ಹತಾಸೆ ಆಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಸಹ ಲೋಕಸಭೆ ಗೆಲ್ಲುವ ವಿಶ್ವಾಸ ಇರಲಿಲ್ಲ, ಹೀಗಾಗಿ ಸಾಕಷ್ಟು ತಂತ್ರಗಾರಿಕೆ ಮಾಡಿದರು. ಜನರ ತೆರಿಗೆ ಹಣವನ್ನು ಬಹಿರಂಗವಾಗಿ ದುರುಪಯೋಗ ಮಾಡಿಕೊಂಡಿತು. ಚುನಾವಣೆ ಆಯೋಗ ಗಮನಿಸಬೇಕಿತ್ತು. ಆದರೆ, ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮತದಾನ ಎರಡು ದಿನ ಮುಂದಿರವಾಗ 2 ತಿಂಗಳ ಗ್ಯಾರಂಟಿ ಯೋಜನೆಯ ಹಣ ಮಹಿಳೆಯರಿಗೆ ಖಾತೆಗೆ ಹಾಕಿದರು. ಒಂದು ತಿಂಗಳು ಅಡ್ವಾನ್ಸ್ ಹಣ ಕೊಟ್ಟರು. ಮತದಾನದ ಎರಡು ದಿನ ಮೊದಲು ಹಣ ಹಾಕುವುದು ಸಣ್ಣ ಮಾತಲ್ಲ, ಜನರ ದುಡ್ಡನ್ನು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹಿಂದೆ ಯಾವುದೇ ಸರ್ಕಾರ ಹೀಗೆ ಮಾಡಿರಲಿಲ್ಲ, ಆದರೂ ಜನ ಅವರಿಗೆ ಮತ ಕೊಡಲಿಲ್ಲ ಎಂದು ಹೇಳಿದರು.
ನಮ್ಮ ಹಣವನ್ನೇ ನಮಗೆ ಕೊಡುತ್ತಾರೆ ಎಂಬ ಅರಿವು ಜನರಿಗೆ ಗೊತ್ತಾಗಿದೆ. ಹಣದುಬ್ಬರ ಹೆಚ್ಚಾಗಿದೆ. ಜನರು ಕೊಂಡುಕೊಳ್ಳುವ ಎಲ್ಲಾ ಧಾರಣೆಗಳ ಬೆಲೆ ಗಗನಕ್ಕೇರಿದೆ. ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಬಾಂಡ್, ಮೋಟಾರು ವೆಹಿಕಲ್ ಟ್ಯಾಕ್ಸ್, ವಿದ್ಯುತ್ ಬೆಲೆ, ಹಾಲು, ಮದ್ಯ, ಈಗ ತೈಲ ಬೆಲೆ ಏರಿಕೆ ಮಾಡಿದ್ದಾರೆ. ರೈತರನ್ನು ಸಂಪೂರ್ಣವಾಗಿ ಕೈ ಬಿಟ್ಟಿದ್ದಾರೆ. ಬರಗಾಲ ಬಂದರೂ ಪರಿಹಾರ ಕೊಟ್ಟಿಲ್ಲ, ಕೇಂದ್ರ ಕೊಟ್ಟಿದ್ದನ್ನೂ ಇನ್ನೂ ಸರಿಯಾಗಿ ಕೊಟ್ಟಿಲ್ಲ, ನಮ್ಮ ಸರ್ಕಾರ ಇದ್ದಾಗ ಕೇಂದ್ರ ಕೊಟ್ಟಿದ್ದಕ್ಕಿಂದ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವು. ಸರ್ಕಾರದ ಆಸ್ತಿ ಮಾರಾಟಕ್ಕೆ ಇಟ್ಟಿದ್ದಾರೆ. ಕರ್ನಾಟಕವನ್ನು ದಿವಾಳಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂ. ಕೊಡುತ್ತೇವೆ ಅಂತ ಹೇಳಿದ್ದರು. ನಯಾಪೈಸೆ ಕೊಟ್ಟಿಲ್ಲ, ಜನರು ಬೆವರು ಸುರಿಸಿ ದುಡಿದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಖರ್ಚು ಮಾಡಬೇಕು. ಇದಕ್ಕಾಗಿ ಹೋರಾಟ ಮಾಡೋಣ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಯೋಜನಾ ಬದ್ದ ಕೆಲಸ
ಹಾವೇರಿ-ಗದಗ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಯೋಜನಾ ಬದ್ದವಾಗಿ ಕೆಲಸ ಮಾಡುತ್ತೇನೆ. ಯುಟಿಪಿ ಯೋಜನೆಯಿಂದ ಹೆಗ್ಗೇರಿ ಕೆರೆ ತುಂಬಿಸಿ 2 ಟಿಎಂಸಿ ನೀರು ಸಂಗ್ರಹಿಸಬೇಕಿದೆ. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಯೋಜನೆ ರೂಪಿಸಿದ್ದೆ. ಅದನ್ನು ಸರ್ಕಾರ ಜಾರಿಗೊಳಿಸಬೇಕು. ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಕಾಲ ಬಂದಿದೆ. ಸರ್ಕಾರಕ್ಕೆ ಸಲಹೆ ಕೊಡುತ್ತೇನೆ, ತಿಳಿ ಹೇಳುತ್ತೇನೆ ಇದರ ಜೊತೆಗೆ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು.
ಹಾವೇರಿಯಲ್ಲಿ ಹಾಲು ಒಕ್ಕೂಟ ಮಾಡಿದ್ದೇವೆ. ಡಿಸಿಸಿ ಬ್ಯಾಂಕ್ ಆರಂಭಿಸುವುದಕ್ಕೆ ನಬಾರ್ಡ್, ರಿಸರ್ವ್ ಬ್ಯಾಂಕ್ ಸಹಕಾರ ಕೊಡಲಿಲ್ಲ, ಆದರೆ, ಹೋರಾಟ ನಿಂತಿಲ್ಲ, ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಎಲ್ಲಾ ವರ್ಗದ ಜನರಿಗೆ ಉದ್ಯೋಗ ನೀಡುವ ಮೂಲಕ ದೊಡ್ಡ ಪರಿವರ್ತನೆ ಮಾಡಲಾಗುವುದು. ಲೋಕಸಭಾ ಕ್ಷೇತ್ರಕ್ಕೆ ವಿಜನ್ ಡಾಕ್ಯುಮೆಂಟ್ ಮಾಡಿ ಜನರ ಸಲಹೆ, ಸೂಚನೆಗಳನ್ನು ಪಡೆದು ಕೆಲಸ ಮಾಡುತ್ತೇನೆ. ನಿಮ್ಮ ಚುನಾವಣೆಯನ್ನೂ ನನ್ನ ಚುನಾವಣೆಗಿಂತಲೂ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಕಚೇರಿ ಆರಂಭಿಸಿ ಎಲ್ಲೆಲ್ಲಿ ಯಾವಾಗ ಸಿಗುತ್ತೇನೆ ಎಂಬುದರ ಕುರಿತು ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಈ ಲೋಕಸಭಾ ಚುನಾವಣೆ ಹಿಂದಿನ ಲೋಕಸಭಾ ಚುನಾವಣೆಗಿಂತಲೂ ಭಿನ್ನವಾಗಿತ್ತು. ಬೊಮ್ಮಾಯಿ ಅವರು ಮೆಡಿಕಲ್ ಕಾಲೇಜ್ ಆರಂಭಿಸಿದ್ದಾರೆ. ಇಲ್ಲಿನ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ಪ್ರತ್ಯೇಕ ಹಾಲು ಒಕ್ಕೂಟ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ. ಹಾವೇರಿ ಕ್ಷೇತ್ರದ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಇಡೀ ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ. ಬೊಮ್ಮಾಯಿ ಅವರು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಗ್ರಾಮೀಣ ಮಂಡಳದ ಅಧ್ಯಕ್ಷರಾದ ಬಸವರಾಜ ಕಳಸೂರ ಹಾಗೂ ನಗರ ಘಟಕದ ಅಧ್ಯಕ್ಷರಾದ ಗಿರೀಶ ತುಪ್ಪದ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಬಸವರಾಜ ಅರಬಗೊಂಡ, ನಾಗೇಂದ್ರ ಕಟಕೋಳ, ಪರಮೇಶಪ್ಪ ಮೇಗಳಮನಿ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.