ನವದೆಹಲಿ: ಕರ್ನಾಟಕ ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ನಲ್ಲಿ ಅಂತರ್ಯುದ್ಧ ನಡೆದಿದ್ದು, ಸರ್ಕಾರ ಸಂಪೂರ್ಣ ಆಡಳಿತ ವೈಫಲ್ಯ ಕಂಡಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ವರ್ಷದಿಂದಲೂ ಸಿಎಂ, ಡಿಸಿಎಂ ಹುದ್ದೆಗಾಗಿ ಫೈಟ್ ನಡೆದೇ ಇದೆ ಎಂದು ಪ್ರತಿಕ್ರಿಯಿಸಿದರು.
ಸಿಎಂ, ಡಿಸಿಎಂ ಹುದ್ದೆಗಳಿಗಾಗಿ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಮತ್ತೆ ಮುಂದುವರೆದಿದ್ದು, ನಾಯಕರೊಳಗಿನ ಅಂತರ್ಯುದ್ಧ ಗಂಭೀರ ಸ್ವರೂಪ ಪಡೆದಂತಿದೆ. ಇದು ಸಹಜವಾಗಿ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಡಿಸಿಎಂ ಡಿಕೆ ಶಿವಕುಮಾರ ಅವರನ್ನು ವೀಕ್ ಮಾಡಲು ಸಿಎಂ ಸಿದ್ದರಾಮಯ್ಯ ಚಿಂತಿಸುತ್ತಿರುವಂತಿದೆ. ಹೀಗಾಗಿಯೇ ಕಾಂಗ್ರೆಸ್ ನ ಒಂದು ಬಣ ಹೆಚ್ಚಿನ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿದೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿಕೆ ಶಿಕುಮಾರ ಅವರನ್ನು ಸಿಎಂ ಮಾಡಲು ಮತ್ತೊಂದು ಬಣ ಒತ್ತಡ ಹೇರುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.
ಒಟ್ಟಾರೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಮತ್ತೆ ನಾಯಕತ್ವ ಹಾಗೂ ಸಿಎಂ, ಡಿಸಿಎಂ ಹುದ್ದೆಳಿಗಾಗಿ ಆಂತರಿಕ ಕಾದಾಟ ಶುರುವಾಗಿದೆ. ಇದೆಲ್ಲದರ ಪರಿಣಾಮ ಆಡಳಿತದ ಮೇಲೆ ಬೀರುತ್ತಿದೆ ಎಂದು ಜೋಶಿ ಹೇಳಿದರು.
ಆಡಳಿತ ಯಂತ್ರ ಕುಸಿತ: ಕಾಂಗ್ರೆಸ್ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ರಾಜ್ಯದ ಹಣಕಾಸು ಸ್ಥಿತಿಗತಿಯೂ ಸರಿಯಿಲ್ಲದಾಗಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದರು.