ಬೆಂಗಳೂರು: ಗಟ್ಟಿತನವಿದ್ದ ಕಾರಣಕ್ಕೆ ನಾವು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು ವರದಿಯನ್ನು ಸ್ವೀಕಾರ ಮಾಡಿದ್ದು, ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿಯ ಸಾಧಕ ಬಾಧಕಗಳ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಯಾವುದೇ ಸಮುದಾಯಕ್ಕೂ ನೋವಾಗದಂತೆ ವರದಿಯನ್ನು ಅನುಷ್ಠಾನಗೊಳಿಸಲಾಗುವುದು. ರಾಜ್ಯದ ಹಿಂದುಳಿದ ವರ್ಗಗಳ ಆಶಯದ ಬಗ್ಗೆ ಮುಖ್ಯಮಂತ್ರಿಗಳಿಗೆ
ಗಮನವಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ಈ ಹಿಂದೆ ಆಡಳಿತದಲ್ಲಿದ್ದ ಯಾವುದೇ ಸರ್ಕಾರ ಕೂಡ ಕಾಂತರಾಜು ಅವರ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹಿಂದುಳಿದ ಸಮಾಜದ ಸ್ಥಿತಿಗತಿ ಬಗ್ಗೆ ತಿಳಿಯಲು ಆಯೋಗ ರಚಿಸಿದ್ದರು. ಪುನಃ ಸಿದ್ದರಾಮಯ್ಯ
ಅವರೇ ಮುಖ್ಯಮಂತ್ರಿ ಆಗಿದ್ದು, ವರದಿ ಸ್ವೀಕಾರ ಮಾಡಿದ್ದೇವೆ. ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ವರದಿಯ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ಸಚಿವರು ತಿಳಿಸಿದರು.
ಸಚಿವ ಸ್ಥಾನದಲ್ಲಿ ತೃಪ್ತಿ ಇದೆ; ಪಕ್ಷದ ನಾಯಕರು ನನ್ನನ್ನು ಗುರುತಿಸಿ ಎರಡು ಬಾರಿ ಮಂತ್ರಿ ಮಾಡಿದ್ದು, ನಾನು ಕೆಪಿಸಿಸಿ ಅಧ್ಯಕ್ಷನಾಗುವಷ್ಟು ದೊಡ್ಡವನಲ್ಲ. ನನಗೆ ಈಗ ಕೊಟ್ಟಿರುವ ಜವಾಬ್ದಾರಿಯಲ್ಲೇ ತೃಪ್ತಿ ಇದೆ ಎಂದು ಸಚಿವ ತಂಗಡಗಿ ಹೇಳಿದರು.
ಮುಂದಿನ ದಿನಗಳಲ್ಲಿ ನಾನು ಆ ಮಟ್ಟಕ್ಕೆ ಬೆಳೆದು, ಸಂಘಟನೆಯಲ್ಲಿ ಪಕ್ಷ ಏನು ಬೇಕಾದರೂ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಬ್ಬ ವ್ಯಕ್ತಿಗೆ, ಒಂದು ಹುದ್ದೆ ಎಂಬ ಬಗ್ಗೆ ಪಕ್ಷದಲ್ಲಿ ಧ್ವನಿ ಎತ್ತಿದ್ದರಲ್ಲ ಎಂಬ ಪ್ರಶ್ನೆಗೆ, ಅದು ಅವರ ಅಭಿಪ್ರಾಯ. ಈ ಬಗ್ಗೆ ನಾನು ಚರ್ಚೆ ಮಾಡುವ ಅಗತ್ಯ ಇಲ್ಲ. ನನ್ನ ಆದ್ಯತೆ ಪಕ್ಷ ನಿಷ್ಠೆ ಹಾಗೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ನೀಡುವ ಆದೇಶ ಪಾಲಿಸುವುದಷ್ಟೇ ಎಂದರು.