ಚನ್ನಪಟ್ಟಣ, ಜುಲೈ 2: “ಯಾರೇ ಬರಲಿ, ಯಾರೇ ಹೋಗಲಿ, ಏನೇ ಟೀಕೆ ಮಾಡಲಿ, ನಾನು ತಲೆಕೆಡಿಸಿ ಕೊಳ್ಳುವುದಿಲ್ಲ. “ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಜನರಿಗೆ ಸಹಾಯ ಮಾಡಿದ್ದು ಮಾತ್ರ ಶಾಶ್ವತ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಬೈರಾಪಟ್ಟಣ ಹಾಗೂ ಹೊಂಗನೂರಿನ ಬಳಿ ಸುಣ್ಣಘಟ್ಟದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಯಾರು ಏನೇ ಹೇಳಿದರು ನನಗೆ ಜನ ಸೇವೆ ಮುಖ್ಯ. ನಾನು ನಿಮ್ಮ ಮನೆ ಮಗ, ಸೇವಕ. ಚನ್ನಪಟ್ಟಣ ತಾಲೂಕಿನ ಜನತೆಗೆ ಶಿವಕುಮಾರ್ ಮನೆ ಬಾಗಿಲು ಸದಾ ತೆರೆದಿರುತ್ತದೆ ” ಎಂದರು.
![](https://i0.wp.com/thenewzpeg.com/wp-content/uploads/2024/07/SZBB-B-X.jpg?resize=800%2C587&ssl=1)
ಈಗ ಬಂದಿದ್ದಾರೆ ಚುನಾವಣೆ ಆದ ನಂತರ ಹೋಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಧಿಕಾರ ಇದ್ದಾಗ ಜನರ ಕೆಲಸ ಮಾಡಬೇಕಿತ್ತು. ಬಡವರ ಕೆಲಸ ಮಾಡಬೇಡಿ ಎಂದು ಕುಮಾರಣ್ಣ ಮತ್ತು ಯೋಗೇಶ್ವರ್ ಗೂ ಹೇಳಿಲ್ಲ. ಕೆಲಸ ಮಾಡಬೇಡಿ ಎಂದು ಯಾರಾದರು ಅಡ್ಡ ಹಾಕಿಕೊಂಡಿದ್ದರೆ? ನಾವು ಈಗ ನಮ್ಮದೇ ಶೈಲಿಯಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.
ಚನ್ನಪಟ್ಟಣಕ್ಕೆ 167 ಕೋಟಿ ಅನುದಾನ
![](https://i0.wp.com/thenewzpeg.com/wp-content/uploads/2024/07/FXBFXBFBXFB.jpg?resize=800%2C463&ssl=1)
“ಚನ್ನಪಟ್ಟಣ ತಾಲ್ಲೂಕು ಅಭಿವೃದ್ಧಿಗೆ ನೀರಾವರಿ ಇಲಾಖೆಯಿಂದ ರೂ. 167 ಕೋಟಿ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿಗಳು 100 ಕೋಟಿ ವಿಶೇಷ ಅನುದಾನ ನೀಡುವುದಾಗಿ ಹೇಳಿದ್ದಾರೆ . ಅಲ್ಲದೇ ರೈಲ್ವೆ ಸೇತುವೆ ಕಾಮಗಾರಿ, ಆನೆ ದಾಳಿ ತಡೆಯಲು ಬ್ಯಾರಿಕೇಡ್ ಕಾಮಗಾರಿ. ರಸ್ತೆ, ಚರಂಡಿ ದುರಸ್ಥಿ ಕಾಮಗಾರಿಗೆ ಚನ್ನಪಟ್ಟಣಕ್ಕೆ 70 ಕೋಟಿ, 50 ಕೋಟಿ ವೆಚ್ಚದಲ್ಲಿ ಕಣ್ವ ನದಿಗೆ ಅಡ್ಡಾಲಹಳ್ಳಿ ಬಳಿ ಬ್ಯಾರೇಜ್ ಕಾಮಗಾರಿ, ಗರಕನಹಳ್ಳಿ ಏತ ನೀರಾವರಿ ಯೋಜನೆಯ ಉನ್ನತೀಕರಣ ಮತ್ತು ಕೋಡಂಬಳ್ಳಿ ಏರು ಕೊಳವೆ ಶಾಖೆಯ ಸಾಮರ್ಥ್ಯ ವೃದ್ಧಿಗಾಗಿ 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. 540 ಕೋಟಿ ವೆಚ್ಚದಲ್ಲಿ ಸತ್ತೇಗಾಲದಲ್ಲಿ ನೀರಾವರಿ ಕಾಮಗಾರಿ ನಡೆಯುತ್ತಿದೆ” ಎಂದು ತಿಳಿಸಿದರು.
“ನಿವೇಶನ ಮತ್ತು ಮನೆ ಬೇಕು ಎಂದು ಕ್ರಮವಾಗಿ 2,500 ಮತ್ತು 1,121 ಜನರು ಒಟ್ಟು 4 ಸಾವಿರ ಜನರು ಮನೆ ಹಾಗೂ ನಿವೇಶನ ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವ ಕುಟುಂಬಗಳಿಗೆ ಅವಶ್ಯಕತೆ ಇದ್ದವರಿಗೆ ಹಂಚಿಕೆ ಮಾಡಲಾಗುವುದು. ಕನಕಪುರದಲ್ಲಿ 100 ಎಕರೆಯಲ್ಲಿ ಹೊಸ ಬಡಾವಣೆ ಮಾಡಲಾಗಿದ್ದು ಇದೇ ಮಾದರಿಯಲ್ಲಿ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಯೋಜನೆ ರೂಪಿಸಲಾಗುವುದು” ಎಂದರು.
![](https://i0.wp.com/thenewzpeg.com/wp-content/uploads/2024/07/XFBFXBXBB.jpg?resize=800%2C519&ssl=1)
“ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾವು ಪಣ ತೊಟ್ಟಿದ್ದೇವೆ. ಅದ್ಕಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ಇದು ಕೇವಲ ಒಂದು ಪಕ್ಷದ ಕೆಲಸವಲ್ಲ. ನೀವು ಯಾವುದೇ ಪಕ್ಷಕ್ಕೆ ಮತ ಹಾಕಿದ್ದರೂ ಮುಜುಗರ ಪಟ್ಟುಕೊಳ್ಳದೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಾವು ಬಗೆಹರಿಸುತ್ತೇವೆ” ಎಂದು ಭರವಸೆ ನೀಡಿದರು.
ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧದ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿದ್ದಾರೆ. ನಾವು ಆಯ್ಕೆಯಾಗಿರುವುದೇ ಜನಸೇವೆ ಮಾಡಲು” ಎಂದು ಹೇಳಿದರು.
ಕಳೆದ 5 ಕಾರ್ಯಕ್ರಮಗಳಲ್ಲಿ ಅರ್ಜಿ ಸಲ್ಲಿಸಲು ಆಗದೆ ಇರುವವರಿಗೆ ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಈ ಸೌಲಭ್ಯವನ್ನು ಎಲ್ಲರು ಉಪಯೋಗಿಸಿಕೊಳ್ಳಬೇಕು. ಅಧಿಕಾರಿಗಳು ಯಾವ ರೀತಿಯ ವ್ಯವಸ್ಥೆ ಮಾಡಿದ್ದಾರೆ ಎಂದು ಪರಿಶೀಲನೆ ನಡೆಸುತ್ತೇನೆ” ಎಂದು ಹೇಳಿದರು.
ಬೈರಾಪಟ್ಟಣ ವೆಂಕಟಗಿರೀಗೌಡರ ಕರ್ಮಭೂಮಿ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಅವರ ಜೊತೆ ನಿಕಟವಾಗಿ ಸಂಪರ್ಕ ಇಟ್ಟುಕೊಂಡಿದ್ದೆ. ಈ ಊರಿನಲ್ಲಿ ವಿದ್ಯಾವಂತರು, ಶಿಕ್ಷಕರು, ಪ್ರೊಫೆಸರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದು ಪ್ರಜ್ಞಾವಂತರ ಗ್ರಾಮ” ಎಂದು ಶ್ಲಾಘಿಸಿದರು.
ಉಚಿತ ಬಸ್ ಬಿಟ್ಟಿದ್ದೀರಿ ಎಂದ ಪ್ರಧಾನಿಗಳು
![](https://i0.wp.com/thenewzpeg.com/wp-content/uploads/2024/07/BFXBFXB.jpg?resize=800%2C511&ssl=1)
ಪ್ರಧಾನಿಗಳ ಭೇಟಿ ವೇಳೆ ಬೆಂಗಳೂರಿನ ಮೆಟ್ರೋ ವಿಚಾರವಾಗಿ ಹೆಚ್ಚಿನ ಅನುದಾನ ಕೇಳಿದೆ. ‘ನೀವು ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಬಿಟ್ಟಿದ್ದೀರಿ, ಮೆಟ್ರೋಗೆ ಜನರೇ ಹತ್ತುತ್ತಾ ಇಲ್ಲ’ ಎಂದು ಹೇಳಿದರು. ಆದರೆ ಗ್ರಾಮೀಣ ಭಾಗದಲ್ಲಿ ಜನರು ಬಳಕೆ ಮಾಡುವುದೇ ಸರ್ಕಾರಿ ಬಸ್ ಗಳನ್ನು” ಎಂದರು.
ರಾಮನಗರ ಜಿಲ್ಲೆಯಲ್ಲಿ ಶೇ 96 ರಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿವೆ. ಗ್ಯಾರಂಟಿ ಯೋಜನೆ ಕೊಟ್ಟಾಗ ಅತ್ತೆ, ಸೊಸೆ ಜಗಳ ತಂದಿಟ್ಟರು. ಮನೆ ಭಾಗ ಮಾಡಿದರು ಎಂದು ಸುಳ್ಳು ಹಬ್ಬಿಸಿದರು. ನಾವು ಯಾರನ್ನು ಭಾಗ ಮಾಡಿಲ್ಲ. ಗ್ಯಾರಂಟಿಯಿಂದ ಜನರ ಅಭಿವೃದ್ಧಿ ಮಾಡಿದ್ದೇವೆ. ರಾಮನಗರಕ್ಕೆ 100 ಹೊಸ ಕೆಎಸ್ ಆರ್ ಟಿಸಿ ಬಸ್ ಗಳನ್ನು ಬಿಟ್ಟಿದ್ದೇವೆ. ಇಲ್ಲಿಂದ ಮಂಡ್ಯಕ್ಕೆ ಬಸ್ ಬೇಕು ಎಂದು ಮನವಿ ಸಲ್ಲಿಸಲಾಗಿದ್ದು ಅದನ್ನು ಆದಷ್ಟು ಬೇಗ ಪರಿಹಾರಿಸಲಾಗುವುದು” ಎಂದು ಹೇಳಿದರು.
ಸಾರ್ವಜನಿಕರ ಸಮಸ್ಯೆ ಪರಿಹಾರ ಮುಖ್ಯ
![](https://i0.wp.com/thenewzpeg.com/wp-content/uploads/2024/07/XVXVXV-X.jpg?resize=800%2C555&ssl=1)
“ದಪ್ಪ ಹಾರ ಹಾಕಬೇಡಿ ಹಾಗೂ ನನ್ನ ಸುತ್ತ ಸುತ್ತುವರೆಯಬೇಡಿ. ನಿಮ್ಮ ಮುಖ ಪರಿಚಯವಿದೆ. ಆದರೆ ಸಾರ್ವಜನಿಕರಿಗೆ ಅವರ ಪರಿಚಯ ಮಾಡಿಕೊಳ್ಳಬೇಕು, ಸಮಸ್ಯೆ ಹೇಳಿಕೊಳ್ಳಬೇಕು ಎನ್ನುವ ಅಭಿಲಾಷೆ ಇರುತ್ತದೆ. ಆದ ಕಾರಣ ಮೊದಲು ಜನರಿಗೆ ಅವಕಾಶ ಮಾಡಿಕೊಡಿ, ಅವರ ಸಮಸ್ಯೆ ಪರಿಹಾರ ಬಹಳ ಮುಖ್ಯ” ಎಂದು ಸೂಚನೆ ನೀಡಿದರು.
ಅಧಿಕಾರಿಗಳು ಸರಕಾರ ಮತ್ತು ಜನರ ನಡುವಣ ಕೊಂಡಿ
“ಕಚೇರಿಯಲ್ಲಿ ಅಧಿಕಾರಿಗಳು ಜಿಡ್ಡು ಹಿಡಿದುಕೊಂಡು ಕುಳಿತಿದ್ದಾರೆ. ಅವರಿಗೆ ಚುರುಕು ಮುಟ್ಟಿಸಲು ಹಾಗೂ ಜನರ ಕಷ್ಟ ಏನು ಎಂದು ತಿಳಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ಅದೇ ರೀತಿ ಸರ್ಕಾರ ಹಾಗೂ ಜನರ ನಡುವಿನ ಕೊಂಡಿ ಅಧಿಕಾರಿಗಳು” ಎಂದರು.
50 ಸಾವಿರ ಲಂಚ ಕೇಳಿದ ಅಧಿಕಾರಿ ಅಮಾನತಿಗೆ ಸೂಚನೆ
![](https://i0.wp.com/thenewzpeg.com/wp-content/uploads/2024/07/CBBXXB-XB.jpg?resize=800%2C485&ssl=1)
ನಾಡ ಕಚೇರಿಯಲ್ಲಿ ಪಿಂಚಣಿ ಮಾಡಿಕೊಡಲು ಹರ್ಷಿತ ಎನ್ನುವ ನೌಕರಳು 50 ಸಾವಿರ ಲಂಚ ಕೇಳುತ್ತಾ ಇದ್ದಾರೆ ಎಂದು ದೊಡ್ಡ ಮಳೂರು ಗ್ರಾಮದ 70 ವರ್ಷದ ಯಶೋಧಮ್ಮ ದೂರು ನೀಡಿದಾಗ ಸಿಟ್ಟಾದ ಡಿಸಿಎಂ ಅವರು ಜಿಲ್ಲಾಧಿಕಾರಿಗಳನ್ನು ಕರೆದು “ಕೂಡಲೇ ಇದರ ಬಗ್ಗೆ ತನಿಖೆ ಮಾಡಬೇಕು. ತಪ್ಪು ಸಾಬೀತಾದರೆ ಈ ಅಧಿಕಾರಿಯನ್ನು ಅಮಾನತು ಮಾಡಬೇಕು. ನನಗೆ ಕೂಡಲೇ ಮಾಹಿತಿ ನೀಡಬೇಕು” ಎಂದು ಸೂಚನೆ ನೀಡಿದರು.
ಒಂದೇ ದಿನ ಪಡಿತರ ಕೊಡುತ್ತಿದ್ದಾರೆ ಎಷ್ಟು ಬಾರಿ ಮನವಿ ಮಾಡಿದರು ಕೇಳುತ್ತಿಲ್ಲ. ದೂರದ ಊರುಗಳಿಗೆ ನಡೆದುಕೊಂಡು ಹೋಗಬೇಕು ಎಂದು ಕೋಟಮಾರನಹಳ್ಳಿ ಮಂಜುಳಾ ಅವರು ದೂರು ನೀಡಿದಾಗ “ಎಲ್ಲಾ ಪಡಿತರ ವಾಟ್ಸಪ್ ಗುಂಪು ರಚನೆ ಮಾಡಿ ಮಾಹಿತಿ ನೀಡಿ. ಜನರಿಗೆ ಕಷ್ಟ ಕೊಡುತ್ತಿರುವ ವಿತರಕರ ಲೈಸೆನ್ಸ್ ರದ್ದು ಮಾಡಿ. ತಂತ್ರಜ್ಞಾನ ಮುಂದುವರೆದರು ಬಳಸಿಕೊಳ್ಳಲು ನಿಮಗೆ ಏನು ತೊಂದರೆ. ಜನರ ಕಷ್ಟ ನಿಮಗೆ ಅರ್ಥ ಆಗುವುದಿಲ್ಲವೇ? ” ಎಂದು ಆಹಾರ ಸರಬರಾಜು ಅಧಿಕಾರಿಗೆ ಸೂಚನೆ ನೀಡಿದರು.
11 ವರ್ಷಗಳ ನಂತರ ಷಟಲ್ ಬಸ್ ಪುನರಾರಂಭ
![](https://i0.wp.com/thenewzpeg.com/wp-content/uploads/2024/07/NEWS-PEG-LOGO-FINAL.00_02_46_04.Still179.jpg?resize=800%2C450&ssl=1)
11 ವರ್ಷಗಳ ಹಿಂದೆ ರದ್ದುಗೊಂಡಿದ್ದ ಚನ್ನಪಟ್ಟಣ, ಮದ್ದೂರು ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಕೆಎಸ್ ಆರ್ ಟಿಸಿ ಷಟಲ್ ಬಸ್ ಅನ್ನು ಪುನರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸಾರಿಗೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದರು.
“ಈ ಮಾರ್ಗದಲ್ಲಿ ಬಸ್ ಸಂಚಾರ ನಿಂತು ಹೋಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ನೌಕರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡು ಮತ್ತೆ ಸೇವೆ ಆರಂಭಿಸಲು ನಿರ್ಧಾರಿಸಲಾಗಿದೆ” ಎಂದರು.