Vidyarthi Vidyarthiniyare: ದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ!

ಅರುಣ್ ಅಮುಕ್ತ ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ ಹತ್ತೊಂಬತ್ತರಂದು ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಅದೇ ದಿನ ನೆರೆಯ ಕೇರಳದಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈ ತಿಂಗಳು ಬಿಡುಗಡೆಗೊಳ್ಳುತ್ತಿರೋ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿಯೆಲ್ಲವೂ ವಿಶೇಷವಾಗಿದೆ. ಈಗಾಗಲೇ ಕಾಲೇಜು ಬೇಸಿನ ಈ ಸಿನಿಮಾ ಭಿನ್ನ ಜಾಡಿನಲ್ಲಿ ರೂಪುಗೊಂಡಿದೆ ಎಂಬ ವಿಚಾರ ಪ್ರೇಕ್ಷಕರೆಲ್ಲರಿಗೂ ಮನದಟ್ಟಾಗಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಚಿತ್ರತಂಡ ಮತ್ತೊಂದಷ್ಟು ಖುಷಿಯ ಸಂಗತಿಗಳನ್ನು ಹೊತ್ತು ತಂದಿದೆ.

ಚಿತ್ರತಂಡ ಹಂಚಿಕೊಂಡಿರೋ ಮಾಹಿತಿಯ ಪ್ರಕಾರ ಹೇಳೋದಾದರೆ, ಬಿಡುಗಡೆಗೂ ಮುನ್ನವೇ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹವಾ ಸಾಗರದಾಚೆಗೂ ಹಬ್ಬಿಕೊಳ್ಳಲಿದೆ. ಜುಲೈ 14ರಂದು ದುಬೈನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ಪ್ರತಿಷ್ಠಿತ ಒಎಂಜಿ ಕಂಪೆನಿ ದುಬೈನಲ್ಲಿ ಈ ಚಿತ್ರದ ವಿತರಣಾ ಹಕ್ಕು ಪಡೆದುಕೊಂಡಿದೆ. ಇದಕ್ಕೆ ಬೇಕಾದ ಎಲ್ಲ ತಯಾರಿಗಳನ್ನೂ ಚಿತ್ರತಂಡ ಮಾಡಿಕೊಳ್ಳುತ್ತಿದೆ. ಇದು ವಿದ್ಯಾರ್ಥಿ ವಿದ್ಯಾರ್ಥಿನಿಯರು ರೂಪುಗೊಂಡಿರುವ ರೀತಿ ಮತ್ತು ಅದರ ಕಂಟೆಂಟಿನ ಗಟ್ಟಿತನಕ್ಕೊಂದು ಉದಾಹರಣೆ. ನಿಖರವಾಗಿ ಹೇಳುವುದಾದರೆ, ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಈ ತಿಂಗಳ ಬಹುಮುಖ್ಯ ಚಿತ್ರವಾಗಿ ದಾಖಲಾಗಿದೆ. ಈಗಿರುವ ಕ್ರೇಜ್ ನೋಡುತ್ತಿದ್ದರೆ ದೊಡ್ಡ ಮಟ್ಟದಲ್ಲಿ ಗೆಲ್ಲುವ ಲಕ್ಷಣಗಳೂ ದಟ್ಟವಾಗಿವೆ.

ಇದು ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರ. ಈಗಿನ ಯುವ ಸಮೂಹವನ್ನು ಆವರಿಸಿಕೊಳ್ಳುವಂಥಾ ಕಥೆಯೊಂದಿಗೆ ಅರುಣ್ ಅಮುಕ್ತ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಸದ್ಯದ ಮಟ್ಟಿಗೆ ಎಲ್ಲವೂ ಪಾಸಿಟಿವ್ ಆಗಿದೆ. ಆದರೆ, ಇಂಥಾ ಚಿತ್ರಗಳ ಬೆನ್ನಿಗೆ ಕನ್ನಡದ ತಾರೆಯರು, ತಂತ್ರಜ್ಞರು, ಕಲಾವಿದರೆಲ್ಲ ನಿಲ್ಲುವ ಅವಶ್ಯಕತೆ ಇದೆ. ಸ್ಟಾರ್ ಹೀರೋಗಳು ಇಂಥಾ ಸಿನಿಮಾಗಳಿಗೆ ಪ್ರೋತ್ಸಾಹ ನೀಡೋದು ಈವತ್ತಿನ ಸನ್ನಿವೇಷದ ತುರ್ತು. ಯಾಕೆಂದರೆ, ಈಗೊಂದಷ್ಟು ತಿಂಗಳಿಂದ ಹೇಳಿಕೊಳ್ಳುವಂಥಾ ಗೆಲುವು ದಕ್ಕದೆ ಕನ್ನಡ ಚಿತ್ರರಂಗ ಬಸವಳಿದಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಥರದ ಸಿನಿಮಾಗಳು ಗೆದ್ದರೆ, ದೊಡ್ಡ ದೊಡ್ಡ ಸಿನಿಮಾಗಳ ಹಾದಿಯೂ ಸುಗಮವಾಗುತ್ತೆ. ಚಿತ್ರರಂಗದ ಉಳಿವಿನ ದೃಷ್ಟಿಯಿಂದ ಇಂಥಾ ಚಿತ್ರಗಳ ಗೆಲುವು ಅನಿವಾರ್ಯ.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

More News

You cannot copy content of this page