ಬೆಂಗಳೂರು : ನಗರದ ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ಬೀದಿ ನಾಯಿ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಸತೀಶ್ ರೆಡ್ಡಿ ಬೀದಿ ನಾಯಿ ಪ್ರೇಮಿ ಮಹಿಳೆಯೊಬ್ಬರಿಂದಾಗುತ್ತಿರುವ ಸಮಸ್ಯೆಯ ಬಗ್ಗೆ ಗಮನ ಸೆಳೆದರು.
” ಮನುಷ್ಯರಿಗಿಂತ ನಾಯಿಗಳಿಗೆ ಜಾಸ್ತಿ ಕಾನೂನು ಹಾಗೂ ರಕ್ಷಣೆ ಸಿಗುತ್ತಿದೆ. ಬೀದಿಗಳಲ್ಲಿ ಇರುವ ನಾಯಿಗಳನ್ನು ಅಪಾರ್ಟ್ಮೆಂಟ್ ಒಳಗಡೆ ಕರೆದುಕೊಂಡು ಬಂದು ಲಿಫ್ಟ್ ನಲ್ಲಿ ಕರೆದೊಯ್ಯಲಾಗ್ತಿದೆ. ಮಕ್ಕಳಿಗೆ ಕಚ್ಚಿದ ಪ್ರಕರಣ ನಡೆದಿದೆ” ಎಂದು ಸದನದಲ್ಲಿ ವಿವರಿಸಿದರು.
ನಾವು ನಾಯಿ ಪ್ರೇಮಿಗಳೇ. ಆದರೆ ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಅಪಾರ್ಟ್ಮೆಂಟ್ ಕಾಪೌಂಡ್ ಒಳಗಡೆ ಕರೆದುಕೊಂಡು ಬಂದು ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿದರು. ಇದನ್ನು ಹೀಗೆ ಬಿಟ್ಟರೆ ನಾಳೆ ಮತ್ತೊಬ್ಬರು ಕೋತಿ ತಂದು ಸಾಕ್ತಾರೆ, ಮತ್ತೊಬ್ಬರು ಹಸು ಸಾಕ್ತಾರೆ. ಇದನ್ನು ತಡೆಯಬೇಕಾದ ಅಗತ್ಯ ಇದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ” ಬೀದಿ ನಾಯಿ ಬೀದಿಯಲ್ಲಿ ಇರಲಿ. ಅಪಾರ್ಟ್ಮೆಂಟ್ ಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ” ಎಂದರು.
ಅಪಾರ್ಟ್ಮೆಂಟ್ ನಲ್ಲಿ ಬೀದಿ ನಾಯಿ ಸಮಸ್ಯೆ ಬಗ್ಗೆ ದೂರು ಕೊಟ್ಟರೆ, ನಾಯಿ ಸಾಕುವ ಮಹಿಳೆ ಅವರ ವಿರುದ್ಧ ರೇಪ್ ಕೇಸ್ ಕೊಟ್ಟಿದ್ದಾರೆ. ದಿನನಿತ್ಯ ಜನರು ಸಮಸ್ಯೆ ಅನುಭವಿಸುತ್ತಾರೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ರೆಡ್ಡಿ ಆಗ್ರಹಿಸಿದರು.
ಇದಕ್ಕೆ ಉತ್ತರ ಕೊಟ್ಟ ಸಚಿವ ದಿನೇಶ್ ಗುಂಡೂರಾವ್ ” ಸತೀಶ್ ರೆಡ್ಡಿ ಫವರ್ ಫುಲ್. ಅವರಿಗೆ ಗೊತ್ತಿಲ್ಲದೆ ನಾಯಿ ಅಲ್ಲಾಡಲ್ಲ” ಎಂದು ಕಾಲೆಳೆದರು. ಆದರೆ ಬೀದಿ ನಾಯಿಗಳ ಸಮಸ್ಯೆಗೆ ಕ್ರಮ ಕೈಗೊಳ್ಳಲು ಸೂಕ್ತ ಸೂಚನೆ ಕೊಡುತ್ತೇವೆ. ಅಪಾರ್ಟ್ಮೆಂಟ್ ನಲ್ಲಿ ಹೇಗೆ ಬಿಟ್ಟರು? ಈ ಕುರಿತಾದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಾಯಿ ಹಾವಳಿ, ವಿಧಾನಸೌಧದಲ್ಲಿ ನಾಗರಹಾವು ಬಂದಿದೆ..!
ಬೀದಿ ನಾಯಿ ಸಮಸ್ಯೆ ಚರ್ಚೆಯ ಸಂದರ್ಭದಲ್ಲಿ ಬರೀ ನಾಯಿ ಅಲ್ಲ, ವಿಧಾನಸೌಧಕ್ಕೆ ನಾಗರ ಹಾವು ಬಂದಿದೆ ಎಂದು ಜೆಡಿಎಸ್ ಸದಸ್ಯರೊಬ್ಬರು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್ “ನಾಗರ ಹಾವು ಬೇಕು. ಅದನ್ನು ಬೇಡ ಎಂದು ಹೇಳಬೇಡಿ. ನಿಧಿಯನ್ನು ಕಾಯೋದೇ ಅದು” ಎಂದರು.