ಹುಬ್ಬಳ್ಳಿ : ನಾಳೆಯಿಂದ ಫ್ರೌಢ ಶಾಲೆಗಳ ತರಗತಿಗಳು ಆರಂಭಿಸಲಾಗುತ್ತದೆ, ಈಗಾಗಲೇ ಜಿಲ್ಲಾಧಿಕಾರಿಗಳು, ಡಿಡಿಪಿಐ ಹಾಗೂ ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ನಡೆಸಿ, ಪರಿಸ್ಥಿತಿಯನ್ನು ಅರಿತು ಶಾಂತಿಯುತವಾಗಿ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ಶಾಂತಿಯುತವಾಗಿ ತರಗತಿಗಳು ಆರಂಭವಾಗಲಿವೆ ಎಂದು ವಿವರಿಸಿದ ಅವರು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಸೌಹಾರ್ದತೆಯಿಂದ ಶಾಲಾ ಕಾಲೇಜುಗಳನ್ನ ಆರಂಭಿಸೋದು ನಮ್ಮ ಮೊದಲ ಆದ್ಯತೆ ಎಂದು ಅಭಿಪ್ರಾಯಪಟ್ಟ ಮುಖ್ಯಮಂತ್ರಿ ಅವರು ಹಿಜಾಬ್ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸುವವರ ಬಗ್ಗೆ ನಿಗಾ ವಹಿಸಲಾಗುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವ, ಸುಳ್ಳು ಸಂದೇಶವನ್ನ ಹರಿಬಿಡುವವರ ಮೇಲೆ ನಮ್ಮ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ ಎಂದರು.

ಕೊರೊನಾದಿಂದ ಕಳೆದ ಎರಡು ವರ್ಷದಲ್ಲಿ ಆರ್ಥಿಕತೆಗೆ ಬಹಳ ನಷ್ಟವಾಗಿದೆ, ಮುಂಬರುವ ಬಜೆಟ್ ನಲ್ಲಿ ಅದಕ್ಕೆ ಇನ್ನಷ್ಟು ಉತ್ತೇಜನ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕೊಳಗೇರಿ ಕಾಮಗಾರಿಯೇ ಆರಂಭವಾಗಿಲ್ಲ ಅಕ್ರಮ ಎಲ್ಲಿಂದ ಬಂತು?
ಕೊಳಗೇರಿ ಅಭಿವೃದ್ಧಿ ನಿಗಮದದಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಇನ್ನು ಕಾಮಗಾರಿಯೇ ಆರಂಭ ಆಗಿಲ್ಲ, ಅದು ಹೇಗೆ ಅಕ್ರಮ ಆಗುತ್ತೆ ಎಂದು ತಿಳಿಸಿದರು.




