ಬೆಂಗಳೂರು : ಶಾಲಾ ಕಾಲೇಜುಗಳ ಶಿಕ್ಷಕಿಯರು ಹಿಜಾಬ್ ಧರಿಸಬಾರದು ಎಂದು ಸೂಚನೆ ನೀಡಲಾಗಿದೆ, ಹಿಜಾಬ್ ಧರಿಸಿ ಸರಿಯಾಗಿ ಪಾಠ ಮಾಡಲು ಆಗಲ್ಲ ಈ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ವಿಧಾನಸೌಧದ ಶಿಕ್ಷಣ ಸಚಿವರ ಕೊಠಡಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿ ನಂತರ ಮಾತನಾಡಿದ ಅವರು, 1.20 ಲಕ್ಷ ಅಲ್ಪ ಸಂಖ್ಯಾತ ಮಕ್ಕಳಲ್ಲಿ ೮೦ ಸಾವಿರ ಹೆಣ್ಣು ಮಕ್ಕಳು ಇದ್ದಾರೆ, ಇವತ್ತು 38 ಮಕ್ಕಳು ಶಾಲೆ ಬಿಟ್ಟು ಹೋಗಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಅವರು ಹಿಜಾಬ್ ತೆಗೆಯಲ್ಲ ಅಂತಾ ಶಾಲೆ ಬಿಟ್ಟು ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ಶಾಲೆಗೆ ಬಾರದ ಮಕ್ಕಳ ಕಡೆ ಒತ್ತು ಕೊಡುತ್ತಿದ್ದೇವೆ ಎಂದು ತಿಳಿಸಿದರು. ಎಳೆ ವಯಸ್ಸಿನವರಿಗೆ ಪ್ರವೋಕೇಶನ್ ನಡೆಯುತ್ತಿದೆ, ಡಿಗ್ರಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಇಲ್ಲ, ಡ್ರೆಸ್ ಕೋಡ್ ಇರೋ ಕಡೆ ಪಾಲನೆ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.

ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು, ಎರಡು ಮೂರು ಕಡೆ ಆದ ಗೊಂದಲದ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು. ನಿನ್ನೆ ೧೧ ಕಾಲೇಜುಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು, ಇವತ್ತು ನಾಲ್ಕು ಶಾಲೆಗಳಲ್ಲಿ ಮಾತ್ರ ಕಂಡು ಬಂದಿದೆ ಎಂದು ತಿಳಿಸಿದರು.

ಸಿಎಫ್ ಐ ಸಂಘಟನೆಯವರು ಇದರ ಹಿಂದೆ ನಾವಿದ್ದೀವಿ ಎಂದು ಹೇಳಿಕೊಂಡಿದ್ದಾರೆ, ಯಾರ ಕುಮ್ಮಕ್ಕು ಇದೆ ಅನ್ನೋದರ ಬಗ್ಗೆ ತನಿಖೆ ನಡೀತಿದೆ, ತನಿಖೆಯಿಂದ ಸತ್ಯಾಂಶ ಹೊರಬರುತ್ತೆ ಎಂದರು.

ಹಿಜಾಬ್ ವಿವಾದಕ್ಕೂ ಮೊದಲು ಇದ್ದ ಪರಿಸ್ಥಿತಿಯನ್ನೇ ಮುಂದುವರಿಸುವಂತೆ ಮುಸ್ಲಿಂ ಮುಖಂಡರು ಸಚಿವರಿಗೆ ಮನವಿ ಮಾಡಿದ್ದಾರೆ, ಕೆಲವು ಕಾಲೇಜಲ್ಲಿ ಹಿಜಾಬ್ ಧರಿಸಿ ಬರುತ್ತಿದ್ದರು, ಕೆಲವು ಕಡೆ ಸಮವಸ್ತ್ರ ಧರಿಸಿ ಬರುತ್ತಿದ್ದರು ಇದನ್ನೇ ಮುಂದುವರಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.




