ಬೆಂಗಳೂರು : ನಾನು ಅವರ ಹೆಸರು ಹೇಳಲ್ಲ. ನಾವೆಲ್ಲಾ ಗಡಗಡ ನಡುಗುತ್ತಿದ್ದೇವೆ. ನಾವೆಲ್ಲ ಗಂಡಸರಲ್ಲ. ನಾವು ಹೆಂಗಸರೇ. ಸಿಎಂ ಎದುರಿಗೆ ರಾಮನಗರದಲ್ಲಿ ಗಂಡಸರಾ ಅಂತಾ ಅವರು ಪ್ರಶ್ನೆ ಮಾಡಿದ್ರು. ಹೀಗಾಗಿ ನಮಗೆ ಭಯ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಪಿಎಸ್ ಐ ಪರೀಕ್ಷೆ ಕರ್ಮಕಾಂಡದಲ್ಲಿ ಪ್ರಭಾವಿ ನಾಯಕರೊಬ್ಬರ ಕೈವಾಡವಿದೆ ಎಂಬ ಆರೋಪಕ್ಕೆ ಡಿ ಕೆ ಶಿವಕುಮಾರ್, ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಹೆಸರು ಹೇಳದೇ ಈ ರೀತಿಯಲ್ಲಿ ಪರೋಕ್ಷವಾಗಿ ಟೀಕಿಸಿದರಲ್ಲದೆ, ವ್ಯಂಗ್ಯವಾಡಿದರು. ನನಗೆ ದೂರವಾಣಿ ಕರೆಗಳು ಬರುತ್ತಿವೆ, ಇನ್ನೇನು ಅವರು ಸಿಎಂ ಆಗುವುದರಲ್ಲಿದ್ದಾರೆ, ಅವರ ಹೆಸರು ಹೇಳಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ ಅವರು, ಇಂದು ಬೆಳಗ್ಗೆ ಮಂಡ್ಯದಿಂದ ಬಿಜೆಪಿ ಕಡೆಯವರು ಫೋನ್ ಕಾಲ್ ಮಾಡಿದ್ದರು ಎಂದು ಹೇಳುತ್ತಿದ್ದಾರೆ.
ಇನ್ನೇನು ಸಿಎಂ ಆಗಿಬಿಡ್ತಾರೆ. ಸಿಎಂ ಆಗುವಂತ ಸಂದರ್ಭದಲ್ಲಿ ಪರೀಕ್ಷಾ ಅಕ್ರಮದಲ್ಲಿ ಅಶ್ವತ್ಥ್ ನಾರಾಯಣ್ ಕುಟುಂಬದವರ ಹೆಸರು ಬರುತ್ತಿದೆ, ನೀವು ಅವರ ಹೆಸರು ಏಕೆ ಹೇಳಲಿಕ್ಕೆ ಹೋಗ್ತೀರಾ. ಸ್ವಲ್ಪ ರಕ್ಷಣೆ ಮಾಡಿ ಎಂದಿದ್ದರು ಎಂದು ವಿವರಿಸಿದರು. ನನಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುತ್ತಾರಾ ಇಲ್ವಾ ಅಂತಾ, ಅವರ ಪಕ್ಷದ ನಿರ್ಧಾರ ಅವರಿಗೆ ಎಂದು ಹೇಳಿದರಲ್ಲದೆ, ಈ ಕುರಿತು ಸಿಎಂ ನಿಷ್ಪಕ್ಷಪಾತ ತನಿಖೆ ನಡೆಸಲು ಮುಂದಾಗಬೇಕು ಎಂದರು.
ಪಿಎಸ್.ಐ ಪರೀಕ್ಷಾ ಅಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗಿಯಾಗಿದ್ದಾರೆ ಅಂತಾ ನಾನು ಹೇಳಲ್ಲ ಎಂದು ಹೇಳಿಕ ಡಿ ಕೆ ಶಿವಕುಮಾರ್, ಸಿ ಎಂ ಬೊಮ್ಮಾಯಿ ಅವರ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ಆದ್ರೆ ಸಿಎಂ ಅವರು ಸಚಿವರ ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.

ಯಾರೇ ಇರಲಿ. ಎಷ್ಟೇ ದೊಡ್ಡವರಾಗಿರಲಿ ನಿಷ್ಪಕ್ಷಪಾತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು, ಸಿಐಡಿ ಅಧಿಕಾರಿಗಳು ಆಯ್ಕೆ ಆದ ವಿದ್ಯಾರ್ಥಿಗಳ ಹಳ್ಳಿಗಳಿಗೆ ಹೋಗಿಲ್ಲ, ಸರಿಯಾಗಿ ತನಿಖೆ ನಡೆಸುತ್ತಿಲ್ಲ, ಆಯ್ಕೆಯಾದವರು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬ ಮಾಹಿತಿ ಕಲೆಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸರ್ಕಾರ ಅಕ್ರಮವನ್ನು ಮುಚ್ವಿಹಾಕಲು ಹೊರಟಿದೆ ಎಂದು ಟೀಸಿದರು.

ಪ್ರಭಾವಿ ಸಚಿವರೊಬ್ಬರು ಕರೆ ಮಾಡಿ, ಅಕ್ರಮದಲ್ಲಿರುವರೊಬ್ಬರನ್ನ ಪೊಲೀಸರಿಂದ ಬಿಡಿಸಿದ್ದಾರೆ ಎಂಬ ಮಾಹಿತಿ ಇದೆ, ಯಾರು ಕರೆ ಮಾಡಿದ್ದು, ಏಕೆ ಕರೆ ಮಾಡಿದ್ದಾರೆ, ಅವರ ಪಾತ್ರ ಏನು ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ಭ್ರಷ್ಟಾಚಾರವನ್ನ ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಅದು ಹೊರಗೆ ಬಂದೇ ಬರುತ್ತೆ ಎಂದು ಕಿಡಿಕಾರಿದರು.




