ನಂಜನಗೂಡು : ದೇವರ ತಾಳಿ ಕದ್ದ ಖದೀಮರು ಎರಡು ದಿನಗಳ ನಂತರ ತಪ್ಪುಕಾಣಿಕೆ ಸಮೇತ ಹಿಂದಿರುಗಿಸಿರುವ ಘಟನೆ ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದ ದುರ್ಗಾಂಭ ದೇವಸ್ಥಾನದಲ್ಲಿ ನಡೆದಿದೆ.
ಇದು ದೇವಿಯ ಮಹಿಮೆ ಎಂಬ ನಂಬಿಕೆ ಸ್ಥಳೀಯರದ್ದು. ತಾಳಿ ಕದ್ದ ಖದೀಮರು ಅದನ್ನು ವಾಪಾಸ್ಸು ತಂದಿಟ್ಟಿರುವುದು ನಿಜವಾಗಿಯೂ ಆಶ್ಚರ್ಯಕರ ಘಟನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಳೆದ ವಾರ ಹುಂಡಿ ಲಟಾಯಿಸಲು ಬಂದ ಖದೀಮರು ದೇವರ ತಾಳಿಯನ್ನೂ ಸಹ ಕಳ್ಳತನ ಮಾಡಿದ್ದರು. ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿ ನಂತರ ನಾಲ್ಕು ದಿನ ದೇವಸ್ಥಾನದ ಬಾಗಿಲು ಮುಚ್ಚಿದ್ದಾರೆ. ಭಾನುವಾರ ಎಂದಿನಂತೆ ಬಾಗಿಲು ತೆರೆಯಲು ಬಂದ ಅರ್ಚಕರಿಗೆ ಅಚ್ಚರಿ ಕಾದಿತ್ತು.

ಕದ್ದಿದ್ದ ತಾಳಿಯನ್ನ 100 ರೂಪಾಯಿ ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದಾರೆ. ದೇವಿಯ ಮಹಿಮೆಯಿಂದ ಇಂತಹ ಬೆಳವಣಿಗೆ ಸಾಧ್ಯ ಅಂತಾರೆ ದೇವಾಲಯದ ಅರ್ಚಕರು.

ಸಧ್ಯ ನಂಜನಗೂಡು ಗ್ರಾಮಾಂತರ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.





