ಬೆಂಗಳೂರು : ಪಿಎಸ್ಐ ಅಕ್ರಮದಲ್ಲಿ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಸಚಿವ ಅಶ್ವಥ್ ನಾರಾಯಣ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನ ಆರ್ ಟಿ ನಗರದ ಅವರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಯಲ್ಲಿ ಸರ್ಕಾರ ಪ್ರಭಾವ ಬೀರುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ನ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರ ಹಿಟ್ ಅಂಡ್ ರನ್ ಆರೋಪವನ್ನು ನಾವು ಒಪ್ಪೋದಿಲ್ಲ, ಕಾಂಗ್ರೆಸ್ ನವರ ಕಾಲದಲ್ಲಿ ಸಾಕಷ್ಟು ಪರೀಕ್ಷೆ ನಡೆದು ಅಕ್ರಮಗಳು ಆಗಿವೆ, ಆದರೆ ಅದಕ್ಕೆ ಸೂಕ್ತ ತನಿಖೆಯನ್ನೇ ಮಾಡಿಲ್ಲ ಎಂದು ಆರೋಪಿಸುವುದರ ಮೂಲಕ ಸಚಿವ ಪರ ವಕಾಲತ್ತು ವಹಿಸಿದರು.
ಕಾಂಗ್ರೆಸ್ ನ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷಧಾರಗಳು ಇಲ್ಲ, ರಾಜಕೀಯ ಕಾರಣಕ್ಕಾಗಿ ದೊಡ್ಡ ಸುದ್ದಿ ಮಾಡಲು ಹೊರಟಿದ್ದಾರೆ, ಅಶ್ವಥ್ ನಾರಾಯಣ್ ವಿರುದ್ದದ ಆರೋಪವನ್ನು ನಾವು ಒಪ್ಪೋದಿಲ್ಲ, ಅದಕ್ಕೆ ಯಾವ ದಾಖಲೆ ಕೂಡ ಇಲ್ಲ ಎಂದರು.
ಇದರಲ್ಲಿ ಕಾಂಗ್ರೆಸ್ ನ ನಾಯಕರು ಕೂಡ ಪಿಎಸ್ಐ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ, ಅದರಲ್ಲಿ ತಾವು ಸಿಕ್ಕಿ ಹಾಕಿಕೊಳ್ತೇವೆ ಎಂಬ ಭಯದಿಂದ ಆರೋಪ ಮಾಡ್ತಿದ್ದಾರೆ ಎಂದರಲ್ಲದೆ, ಕಾಂಗ್ರೆಸಿಗರ ಆಧಾರ ರಹಿತ ಆರೋಪಕ್ಕೆ ಜನ ಮನ್ನಣೆ ಕೊಡಲ್ಲ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ವಕೀಲರು ದೂರು ನೀಡಿರುವ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಅವರು, ಯಾರು ಏನು ದೂರು ನೀಡುತ್ತಾರೋ ಅವೆಲ್ಲದರ ಬಗ್ಗೆ ಪರಿಶೀಲನೆ ನಡೆಸಿ, ಸತ್ಯಾಂಶ ಇದ್ರೆ ತನಿಖೆ ನಡಸಲಾಗುವುದು ಎಂದು ತಿಳಿಸಿದ್ದಾರೆ.
ನಮ್ಮ ತನಿಖೆ ಸ್ಪಷ್ಟವಾಗಿದೆ, ಮುಕ್ತ, ನಿಷ್ಪಕ್ಷಪಾತ, ನಿಷ್ಠುರವಾಗಿದೆ, ಹಲವು ಅಧಿಕಾರಿಗಳ ಸಮೇತ ಕಾರ್ಯಾಚರಣೆ ಮಾಡಲಾಗಿದೆ, ದಿವ್ಯಾ ಹಾಗರಗಿ ಅಷ್ಟೇ ಅಲ್ಲ ಇನ್ನೂ ಹಲವರಿದ್ದಾರೆ, ಎಲ್ಲರೂ ಬುಕ್ ಆಗುತ್ತಿದ್ದಾರೆ ಎಂದು ತಿಳಿಸಿದರು.
ನಂಜನಗೂಡಿನಲ್ಲಿ ಛೋಟಾ ಪಾಕಿಸ್ತಾನ ಎಂದ ವ್ಯಕ್ತಿಯ ಬಗ್ಗೆ ತನಿಖೆ
ನಂಜನಗೂಡಿನ ಕವಲಂದೆಯಲ್ಲಿ ಹಬ್ಬದ ಸಂದರ್ಭದಲ್ಲಿ ಛೋಟಾ ಪಾಕಿಸ್ತಾನ ಎಂಬ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಇದರ ಬಗ್ಗೆ ಮೈಸೂರು ಎಸ್ ಪಿ ಜತೆ ಮಾತನಾಡುತ್ತೇನೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಗಿ ಖರೀದಿಗೆ ನಾಳೆಯಿಂದಲೇ ನೋಂದಣಿ ಕಾರ್ಯ ಆರಂಭವಾಗಲಿದೆ, 2 ಲಕ್ಷ ಟನ್ ಹೆಚ್ಚುವರಿ ಖರೀದಿಗೆ ನಾಳೆಯಿಂದ ಚಾಲನೆ ದೊರೆಯಲಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಸಿಎಂ ಭೇಟಿ ವೇಳೆ ಕುಸಿದು ಬಿದ್ದ ಮಹಿಳೆ
ಸಿಎಂ ಭೇಟಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರು ಮುಖ್ಯಮಂತ್ರಿ ಮನೆ ಮುಂದೆ ಕುಸಿದು ಬಿದ್ದ ಘಟನೆ ನಡೆದಿದೆ. ತಮ್ಮ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ಮಹಿಳೆ, ತುಮಕೂರಿನ ಗುಬ್ಬಿ ಮೂಲದವರಾಗಿದ್ದಾರೆ. ಬೆಳಗ್ಗೆಯಿಂದಲೂ ಸಿಎಂ ನಿವಾಸದ ಬಳಿ ಕಾಯುತ್ತಿದ್ದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುಲಾಯಿತು.




