MINISTER LONDON TOUR: ಲಂಡನ್ ನಲ್ಲಿ ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವ ಅಶ್ವತ್ಥನಾರಾಯಣ

ಲಂಡನ್: ಇಲ್ಲಿನ ಲ್ಯಾಂಬೆತ್ ನಲ್ಲಿನ ಥೇಮ್ಸ್ ನದಿಯ ತಟದಲ್ಲಿರುವ ಬಸವೇಶ್ವರರ ಪ್ರತಿಮೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಭೇಟಿ ನೀಡಿ, ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣ ಅವರ ತತ್ವ-ಚಿಂತನೆಗಳಿಂದ ಪ್ರೇರಣೆ ಪಡೆದುಕೊಂಡಿರುವ ಕರ್ನಾಟಕವು ಇನ್ನು 25 ವರ್ಷಗಳಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ನಾಯಕ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರು 2014ರಲ್ಲಿ ಉದ್ಘಾಟಿಸಿದ ಈ ಪ್ರತಿಮೆಯು ಇಡೀ ವಿಶ್ವಕ್ಕೇ ಒಂದು ಅಮೂಲ್ಯ ಸಂದೇಶವನ್ನು ಸಾರುತ್ತಿದೆ. ಮೋದಿ ಕೂಡ ಪ್ರಜಾಪ್ರಭುತ್ವದ ಪ್ರಸ್ತಾಪ ಬಂದಾಗಲೆಲ್ಲ ಬಸವಣ್ಣನವರ ಪ್ರಜಾಸತ್ತಾತ್ಮಕ ಪರಿಕಲ್ಪನೆಯಾದ ಅನುಭವ ಮಂಟಪದ ಉಲ್ಲೇಖ ಮಾಡುತ್ತಲೇ ಇರುತ್ತಾರೆ. ಈ ದೃಷ್ಟಿಯಿಂದ ನೋಡಿದರೆ, ಬಸವಣ್ಣನವರು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ ಎಂದು ಅವರು ಬಣ್ಣಿಸಿದರು.
ಯಾವುದೇ ಸಮಾಜವು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಸಾಲದು. ಅದರ ಜತೆಯಲ್ಲೇ ಲಿಂಗ ಸಮಾನತೆ, ಸಾಮಾಜಿಕ ಸಮಾನತೆ ಮತ್ತು ನೈತಿಕತೆ ಹಾಗೂ ಮೌಲ್ಯಗಳನ್ನೂ ಸಾಧಿಸಬೇಕು. ಆಗ ಮಾತ್ರ ಮಾನವೀಯ ಸಂಸ್ಕೃತಿ ನೆಲೆಗೊಳ್ಳುತ್ತದೆ ಎನ್ನುವುದು ಬಸವಣ್ಣನವರ ಚಿಂತನೆಯಾಗಿತ್ತು ಎಂದು ಅವರು ನುಡಿದರು.

ಕಾಯಕ, ಜ್ಞಾನ ಮತ್ತು ದಾಸೋಹಗಳಿಗೆ ಪ್ರಾಶತ್ತ್ಯ ಕೊಡುವ ಮೂಲಕ ಬಸವಣ್ಣನವರು 12ನೇ ಶತಮಾನದಲ್ಲೇ ಉದ್ಯೋಗ, ಶಿಕ್ಷಣ ಮತ್ತು ಆಹಾರ ಭದ್ರತೆಗಳ ಬಗ್ಗೆ ಗಾಢವಾಗಿ ಚಿಂತಿಸಿದ್ದರು. ಜತೆಗೆ ಸಮಾಜವನ್ನು ಅನಪೇಕ್ಷಿತ ನಿರ್ಬಂಧಗಳಿಂದ ಮುಕ್ತಗೊಳಿಸಲು ಅವರು ಪ್ರಾಮಾಣಿಕವಾಗಿ ಶ್ರಮಿಸಿದವರಾಗಿದ್ದಾರೆ ಎಂದು ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯ ಅಭಿಜಿತ್ ಸಾಲೀಮಠ ಮತ್ತು `ಯುಕೆ ಕನ್ನಡಿಗರು’ ಸಂಘಟನೆಯ ಅಧ್ಯಕ್ಷ ಗಣಪತಿ ಭಟ್ ಮುಂತಾದವರಿದ್ದರು.

More News