ತುಮಕೂರು: ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ತಿಪಟೂರಿನ ಮನೆ ಮುಂದೆ ಪ್ರತಿಭಟನೆ ನಡೆಸಿ ಚಡ್ಡಿಯನ್ನು ಸುಟ್ಟು ಬಂಧನಕ್ಕೊಳಗಾಗಿರುವ ಜೈಲಿನಲ್ಲಿರುವ NSUI ಕಾರ್ಯಕರ್ತರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಭೇಟಿ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಶ್ ನೇತತ್ವದ ಇಲಾಖೆ ಕರ್ನಾಟಕ ರಾಜ್ಯ ಹಾಗೂ ಭಾರತದ ಇತಿಹಾಸವನ್ನು ತಿರುಗಿಸಲು ಹೊರಟಿದೆ ಎಂದು ಆರೋಪಿಸಿದ ಅವರು, ಅದು ಸರಿಯಿಲ್ಲಾ, ಕುವೆಂಪು, ಬಸವಣ್ಣ, ನಾರಾಯಣಗುರು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವಕರು, ವಿದ್ಯಾರ್ಥಿಗಳು, ಮಠಾಧೀಶರು ಹೋರಾಟ ಮಾಡುತ್ತಿದ್ದಾರೆ, ನಾಗೇಶ್ ಮನೆ ಮುಂದೆ ಅವರೇ ಅವರ ಚಡ್ಡಿಯನ್ನ ತೆಗೆದುಕೊಂಡು ಹೋಗಿ ಸುಟ್ಟಿರಬಹುದು ಎಂದು ಆರೋಪಿಸಿದ ಅವರು, ಧಿಕ್ಕಾರ ಕೂಗಿದ್ದಾರೆ, ಅವರೇನು ಯಾರ ಮನೆ ಒಳಗೂ ಹೋಗಿಲ್ಲಾ, ಇದ್ದ ಪೇಪರನ್ನ ಸುಟ್ಟಿದ್ದಾರೆ ಎಂದರು.
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದವರನ್ನು ಈ ಸರ್ಕಾರ ಏನೂ ಮಾಡಿಲ್ಲ, ನಾಗೇಶ್ ಮನೆಯ ಮುಂದೆ ಚಡ್ಡಿಯನ್ನ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡಿದ್ದಾರೆ ಎಂದು ಕಿಡಿಕಾರಿದರಲ್ಲದೆ, ಇದು ಪ್ರತಿಭಟನೆಯ ಒಂದು ಸ್ವರೂಪ. ಎಲ್ಲರಿಗೂ ಪ್ರತಿಭಟನೆಯ ಹಕ್ಕಿದೆ ಎಂದರು.
ದೆಹಲಿಯಲ್ಲಿ ಮುಖ್ಯಮಂತ್ರಿ ಮನೆಗೆ ನುಗ್ಗಿದ್ದಾರೆ, ಅವ್ರ ಮೇಲೆ ಯಾವ ಕೇಸ್ ಹಾಕಿದ್ದೀರಾ ಎಂದು ಪ್ರಶ್ನಿಸಿದ ಅವರು, ರಾಷ್ಟ್ರ ರೈತ ಮುಖಂಡನ ಮೇಲೆ ಮೋದಿ ಅಂತೇಳಿಕೊಂಡು ಮಸಿ ಬಳೀತಾರೆ, ಅವರ ಮೇಲೆ ಯಾವ ಆಕ್ಷನ್ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ ಅವರು, ಜಾಮೀನು ಸಿಗಲೇಬಾರದು ಅಂತಾ ಹಲವಾರು ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂದು ಆರೋಪಿಸಿದರು.

ಘಟನೆ ನಡೆದ ತಕ್ಷಣ ಗೃಹ ಸಚಿವರು ಹೋಗಿದ್ದಾರೆ, ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿಗೆ ಹೋಗಿದ್ರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರಾದ್ರೂ ದಲಿತರ ರಕ್ಷಣೆ ಮಾಡಲು ಹೋಗಿದ್ದಾರಾ ಎಂದು ಪ್ರಶ್ನಿಸಿದರು.
ಅದು ಆರ್.ಎಸ್.ಎಸ್ ಸಮವಸ್ತ್ರ ಅಂತಾ ಹೇಗೆ ಹೇಳುತ್ತಿದ್ದಾರೆ ಎಂದ ಡಿ ಕೆ ಶಿವಕುಮಾರ್, ಅವರು ಪ್ಯಾಂಟ್ ಹಾಕೋದು, ಅದರ ಮೇಲೆ ಏನಾದರೂ ಸೀಲ್ ಹಾಕಿದ್ದಾರಾ ಎಂದರು. ನಾವು ಕಂಪ್ಲೆಂಟ್ ಕೊಟ್ಟೀದ್ದೀವಿ, ಎಫ್.ಐ.ಆರ್ ಹಾಕಿಲ್ಲಾ, ರೌಡಿಶೀಟರ್ ಗಳನ್ನ ಕರೆಸಿ ನಮ್ಮ ಹುಡುಗರಿಗೆ ಹೊಡೆದಿದ್ದಾರೆ, ವಿಡಿಯೋ ಇದೆ ಎಂದರು.
#Rss, #dkshivakumar, #bjp, #homeminister, #aaragagnanedra, #bcnagesh, #educationminister




