ಕೋಲ್ಕತ್ತಾ : ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಪಾರ್ಥ ಚಟರ್ಜಿ ಈಗಾಗಲೇ ಬಂಧನಕ್ಕೊಳಗಾಗಿದ್ದು, ನಿನ್ನೆ ಮತ್ತೆ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ.
ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆಯವರೆಗೆ ನಡೆದ ದಾಳಿಯಲ್ಲಿ ಸುಮಾರು 20 ಕೋಟಿಗೂ ಅಧಿಕ ನಗದು ಹಾಗೂ ಮೂರು ಕೆಜಿ ಚಿನ್ನವನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಲ್ ಘಾರಿಯಾದಲ್ಲಿರುವ ಅರ್ಪಿತಾ ಅವರಿಗೆ ಸೇರಿದ ಇನ್ನೊಂದು ಮನೆಯಲ್ಲಿ ಇಡಿ ಅಧಿಕಾರಿಗಳು ಬುಧವಾರ ಸಂಜೆ ಕೇಂದ್ರ ಸಶಸ್ತ್ರ ಪಡೆಯ ಸಿಬ್ಬಂದಿಯವರ ಬೆಂಗಾವಲಿನಲ್ಲಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಅವರ ನಿವಾಸಕ್ಕೆ ಬೀಗ ಹಾಕಲಾಗಿತ್ತು. ಬೀಗವನ್ನು ಒಡೆದ ಅಧಿಕಾರಿಗಳು ಬಂಡಲ್ ಬಂಡಲ್ ನೋಟಿನ ಕಂತೆಗಳು ಅವರಿಗೆ ಕಂಡವು.

ಬಳಿಕ ನೋಟುಗಳನ್ನು ಎಮಿಸಲು ಕೋಲ್ಕತ್ತಾದ ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿದಾಗ ಅವರು ನಾಲ್ವರು ಅಧಿಕಾರಿಗಳು ನಾಲ್ಕು ಹಣ ಎಣಿಕೆ ಯಂತ್ರದೊಂದಿಗೆ ಹಣ ಎಣಿಸಿದಾಗ 21 ಕೋಟಿ 20 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ದಾಳಿ ಸಂದರ್ಭದಲ್ಲಿ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣಗಳು ಸುಮಾರು ಮೂರು ಕೆಜಿಯಷ್ಟು ದೊರೆತಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಅಂದರೆ ಜುಲೈ 23 ರಂದು ಅರ್ಪಿತಾ ಅವರಿಗೆ ಸೇರಿದ ಇನ್ನೊಂದು ಮನೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ 21 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು.




