ನವದೆಹಲಿ : ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಇತರ ನಾಲ್ವರಿಗೂ ದೆಹಲಿಯ ಜಾರಿ ನಿರ್ದೇಶನಾಲಯದ (ಇಡಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ದೇಶ ಬಿಟ್ಟು ಹೋಗಬಾರದು ಹಾಗೂ ಸಾಕ್ಷಿ ನಾಶಪಡಿಸಬಾರದು ಎಂಬ ಷರತ್ತುಗಳನ್ನು ವಿಧಿಸಿದ ನ್ಯಾಯಾಲಯ ತಲಾ ಒಂದು ಲಕ್ಷ ರೂಪಾಯಿ ಭದ್ರತಾ ಠೇವಣೆ ಮತ್ತು ಒಬ್ಬರ ಸಾಕ್ಷಿ ಮೇಲೆ ಇಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಇಡಿ ನ್ಯಾಯಾಧೀಶರಾದ ವಿಕಾಸ ಧುಲ್ ಅವರು ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ವಿವಾದವನ್ನು ಆಲಿಸಿದ ನ್ಯಾಯಪೀಠ ಇಂದು ಆದೇಶ ಕಾಯ್ದಿರಿಸಿತ್ತು. ಡಿ ಕೆ ಶಿವಕುಮಾರ್, ಅವರ ನಿಕಟವರ್ತಿಗಳಾದ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ ಪೋರ್ಟ್ ಮಾಲೀಕ ಸುನೀಲ್ ಕುಮಾರ್ ಶರ್ಮಾ, ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.
ನ್ಯಾಯ ಸಿಗುವ ವಿಶ್ವಾಸವಿತ್ತು -ಡಿ ಕೆ ಶಿವಕುಮಾರ್
ನ್ಯಾಯಾಲಯದ ಆದೇಶದ ಬಳಿಕ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನ್ಯಾಯ ಸಿಗುವ ವಿಶ್ವಾಸ ಇತ್ತು, ಸಿಕ್ಕಿದೆ, ಕೃಷಿ, ವ್ಯವಹಾರ, ರಾಜಕೀಯ ಮಾಡಿಕೊಂಡು ಇದ್ದವರು ನಾವು, ಗುಜರಾತ್ ರಾಜ್ಯಸಭಾ ಚುನಾವಣೆ ಬಳಿ ಐಟಿ ದಾಳಿ ಆಗಿತ್ತು ಎಂದು ತಿಳಿಸಿದರು.
ಐಟಿ ದಾಳಿ ಆಗಿ ಐದು ವರ್ಷ ಆಗಿದೆ, ನನಗಿಂತ ಹೆಚ್ಚು ನನ್ನ ಜೊತೆ ಇದ್ದ ಸಹಪಾಠಿಗಳ ಯೋಚನೆ ಆಗಿತ್ತು, ಅವರಿಗೂ ಜಾಮೀನು ಸಿಕ್ಕಿರುವುದು ಹೆಚ್ಚು ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.




