ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೆಗಿನಹಾಳ ಗ್ರಾಮದಲ್ಲಿ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದ ಭಕ್ತರು ತೀವ್ರ ಆಘಾತಕ್ಕೆ ಒಳಗಾಗಿದ್ದು, ಮಠದತ್ತ ಭಕ್ತರು ದೌಡಾಯಿಸುತ್ತಿದ್ದಾರೆ.
2007 ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿದ್ದ ಬಸವಸಿದ್ಧಲಿಂಗ ಸ್ವಾಮೀಜಿ, 15 ವರ್ಷಗಳಿಂದ ಮಡಿವಾಳೇಶ್ವರ ಪೀಠಾಧಿಪತಿ ಆಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ತಡರಾತ್ರಿವರೆಗೂ ಭಕ್ತರ ಜೊತೆ ಮಾತುಕತೆ ನಡೆಸಿದ್ದ ಸ್ವಾಮೀಜಿ, ದಿಢೀರ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ.

ಇಂದು ಬೆಳಗ್ಗೆ ಸ್ವಾಮೀಜಿಯ ಸೇವಕರು ಅವರ ಕೊಠಡಿಗೆ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ನೆಗಿನಹಾಳ ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದೆ. ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
