ನವದೆಹಲಿ : ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ಸುಗ್ರೀವಾಜ್ಙೆ ಜಾರಿ ಮಾಡಿರುವುದು ಇದು ಕೇವಲ ಬಿಜೆಪಿಯವರು ಮಾಡುತ್ತಿರುವ ಕಣ್ಣೊರೆಸುವ ತಂತ್ರವಷ್ಟೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ದೆಹಲಿಗೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಸಲ್ಲಿಕೆಯಾಗಿ ಎಷ್ಟು ವರ್ಷಗಳಾಗಿವೆ, ಇಲ್ಲಿಯವರೆಗೆ ಯಾಕೆ ವರದಿ ಅನುಷ್ಠಾನ ಮಾಡಲಿಲ್ಲ ಎಂದು ಆರೋಪಿಸಿದ ಅವರು, ಈಗ ಯಾಕೆ ತರಾತುರಿಯಲ್ಲಿ ಸುಗ್ರೀವಾಜ್ಙೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ವರದಿ ಜಾರಿಗೆ ಒತ್ತಾಯ ಮಾಡಿದ್ದೆವು, ಸದನದಲ್ಲಿ ನಿರಂತರವಾಗಿ ಒತ್ತಾಯ ಮಾಡಿದ್ದೆವು ಆದ್ದರಿಂದ ಈಗ ಸುಗ್ರೀವಾಜ್ಞೆ ಹೊರಡಿಸಿದ್ದಾರೆ, ಇದರ ಬದಲು ವಿಶೇಷ ಅಧಿವೇಶನ ಕರೆಯಬಹುದಿತ್ತು, ಅಲ್ಲಿ ಬಿಲ್ ಪಾಸ್ ಮಾಡಬೇಕಿತ್ತು ಎಂದು ಆರೋಪಿಸಿದರು.
ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ, ಅಲ್ಲಿ ಶೆಡ್ಯೂಲ್ ೯ಕ್ಕೆ ಸೇರಿಸಬೇಕಲ್ಲವೇ ? ಅದು ಮಾಡಲಿಲ್ಲ, ಆದ್ದರಿಂದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಪರ ಇಲ್ಲ, ನಮ್ಮ ಹೋರಾಟದ ಫಲವಾಗಿ ನ್ಯಾಯ ಸಿಕ್ಕಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಾರ್ಯಕರ್ತರಿಗೆ ನೊಟೀಸ್
ಕಾಂಗ್ರೆಸ್ ನ ಪೇ ಸಿಎಂ ಅಭಿಯಾನ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಕರ್ತರಿಗೆ ಸಿಸಿಬಿ ನೊಟೀಸ್ ಜಾರಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐವರು ಸೋಶಿಯಲ್ ಮಿಡಿಯಾ ಸಿಬ್ಬಂದಿಗೆ ನೊಟೀಸ್ ನೀಡಲಾಗಿದೆ, ಇದು ಮೂರನೇ ಬಾರಿಗೆ ನೊಟೀಸ್ ನೀಡಿದ್ದಾರೆ, ಸಂಜಯ್,ವಿಶ್ವಮೂರ್ತಿ ಸೇರಿ ಐವರಿಗೆ ನೊಟೀಸ್ ನೀಡಿದ್ದಾರೆ ಆದ್ದರಿಂದ ಅವರು ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದರು.

ಪೇಸಿಎಂ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಅವರಿಗೆ ಸಾಕಷ್ಟು ಮುಜುಗರ ಸೃಷ್ಠಿಸಿತ್ತು. ಹಾಗಾಗಿ ಸರ್ಕಾರ ತನಿಖೆಗೆ ಆದೇಶಿಸಿತ್ತು. ಸಿಸಿಬಿ ಮೂಲಕ ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದ್ದು, ಅವರಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿತ್ತು.




