ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವ ಹೊತ್ತಿನಲ್ಲೇ ಎಂಇಎಸ್ ಮತ್ತೆ ಮತ್ತೆ ಗಡಿ ಖ್ಯಾತೆ ಆರಂಭ ಮಾಡಿದೆ. ಕನ್ನಡ ರಾಜ್ಯೋತ್ಸವ ದಿನವನ್ನು ಕರಾಳ ದಿನಾಚರಣೆ ಆಚರಿಸಲು ಮುಂದಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿದೆ.
ನವೆಂಬರ್ 1 ರಿಂದ ಚಳಿಗಾಲದ ಅಧಿವೇಶನದ ಮೊದಲ ದಿನ. ಅದೇ ದಿನದಂದು ಮಹಾಮೇಳಾವ್ ಹಾಗೂ ಅದೇ ದಿನ ಎಂಇಎಸ್ ಕರಾಳ ದಿನ ಆಚರಿಸಲು ಮುಂದಾಗಿದೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕರಾಳ ದಿನದ ಪೋಸ್ಟ್ ಹಾಕುತ್ತಿರುವ ಎಂಇಎಸ್ ಕಾರ್ಯಕರ್ತರು, ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಫೇಸ್ಬುಕ್ ಫೇಜ್ ನಲ್ಲಿ ಪೋಸ್ಟ್ ಮಾಡಿದೆ.

ಗಡಿ ಖ್ಯಾತೆ ತೆಗೆಯುವ ಮೂಲಕ ಎಂಇಎಸ್, ಚುನಾವಣಾ ವರ್ಷ ಆಗಿದ್ದರಿಂದ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಹುನ್ನಾರ ನಡೆಸಿದೆ. ಎಂಇಎಸ್ ಮಾಜಿ ಶಾಸಕ ಮನೋಹರ ಕಿಣೇಕರ್ ನೇತೃತ್ವದ ಎಂಇಎಸ್ ಮುಖಂಡರಿಂದ ಸಭೆ ನಡೆಸಿ ಈ ತೀರ್ಮಾನ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕರಾಳ ದಿನಾಚರಣೆ ಹಾಗೂ ಮಹಾಮೇಳಾವ್ ಗೆ ಈ ಬಾರಿಯೂ ರಾಜ್ಯ ಸರ್ಕಾರ ಬ್ರೇಕ್ ಹಾಕಲಿದೆಯಾ ಎನ್ನುವುದು ಕುತೂಹಲಕ್ಕೆಡೆ ಮಾಡಿದೆ. ಪ್ರತಿ ವರ್ಷವೂ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರಿಂದ ಪುಂಡಾಟ ನಡೆಯುತ್ತಿದೆ.




