ಮುಂಬೈ: ಗಾಂಧಿನಗರ ನಡುವೆ ಓಡಾಡುವ ‘ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ರೈಲು’ ಇಂದು ಮತ್ತೆ ಜಾನುವಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಸಂಚಾರದಲ್ಲಿ 20 ನಿಮಿಷ ವ್ಯತ್ಯಯವಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದಾಗಿ ರೈಲ್ವಿನ ಮುಂಭಾಗದ ಪ್ಯಾನಲ್ ಗೆ ಹಾನಿಯಾಗಿದೆ. ಅದರ ಮೊದಲ ಬೋಗಿಯ ಉಪಕರಣಗಳು ಮುರಿದಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಇದು ಈ ತಿಂಗಳಲ್ಲಿ ಸಂಭವಿಸಿದ ಮೂರನೇ ಪ್ರಕರಣವಾಗಿದೆ.

ಬೆಳಗ್ಗೆ 8-20ರ ಸುಮಾರಿನಲ್ಲಿ ಅಟಲ್ ರೈಲ್ವೆ ನಿಲ್ದಾಣದ ಬಳಿಕ ಜಾನುವಾರ ಹಳಿ ಮೇಲೆ ಬಂದಾಗ ರೈಲು ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ರೈಲ್ವೆ ಸುಮಾರು 20 ನಿಮಿಷ ಅಲ್ಲಿಯೇ ನಿಲ್ಲಬೇಕಾಯಿತು, ನಂತರ ಸಂಚಾರವನ್ನು ಪುನರ್ ಆರಂಭಿಸಿತು. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಪಶ್ಚಿಮ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.




