ರಾಷ್ಟ್ರ ರಾಜಧಾನಿ ಎಂದರೆ ಪಾರ್ಲಿಮೆಂಟ್, ಇಂಡಿಯಾಗೇಟ್, ಕುತುಬ್ ಮಿನಾರ್, ರೆಡ್ ಪೋರ್ಟ್ ಹೀಗೆ ಸಾಲು ಸಾಲು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳು ಕಾಣ್ತವೆ. ಆದರೆ, ವಾಸ್ತವವಾಗಿ ಅಲ್ಲಿನ ವಾಯುಮಾಲಿನ್ಯ ಕಣ್ಣಿಗೆ ಕಾಣಿಸಲ್ಲ. ಇದೀಗ ದೇಶದ ರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ್ದು, ಗಾಳಿಯ ಗುಣಮಟ್ಟ ಅಪಾಯಮಟ್ಟಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಅಧಿಕವಾಗುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದು, ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ನ.10 ರಂದು ವಿಚಾರಣೆಗೆ ಸೂಚಿಸಿದೆ.

ದೆಹಲಿಯಲ್ಲಿ ಮಾಲಿನ್ಯ ಜಾಸ್ತಿಯಾಗುತ್ತಿದ್ದಂತೆಯೇ ವಕೀಲರು ಕೋರ್ಟ್ ನ ಕದ ತಟ್ಟಿದ್ದಾರೆ. ಹೀಗಾಗಿ, ಕಠಿಣ ಸೂಚನೆ ನೀಡಿರುವ ಕೋರ್ಟ್ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಿದೆ. ಕೋರ್ಟ್ ಗೆ ವರದಿ ಸಲ್ಲಿಸಿರುವ ವಕೀಲರು, ಎಕ್ಯೂಐ ಮಟ್ಟವು ಕಳೆದ ಕೆಲವು ವರ್ಷಗಳಲ್ಲಿ 500 ಕ್ಕೆ ಸಮಿಪಿಸಿದೆ. ಫಿಟ್ ಇರುವ ಜನರು ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಂಜಾಬ್ ನಲ್ಲಿ 22 ಪ್ರತಿಶತದಷ್ಟು ಹುಲ್ಲು ಸುಡುವಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇದರ ಹಿಂದೆ ಜನರ ಬದುಕಿದೆ ಮತ್ತು ನಾಳೆ ನಾವು ಅನ್ನುವುದು ಇದೆ ಎಂಬುದನ್ನು ಕಾಣಬೇಕೇಂದು ಸುಪ್ರೀಂ ಮನವಿ ಮಾಡಿದೆ.

ದಿಲ್ಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಏರಿಕೆಯಾಗುತ್ತಲೇ ಇದ್ದು, ಕೆಲವು ದಿನಗಳಲ್ಲಿ ತೀವ್ರ ಮಟ್ಟಕ್ಕೆ ಏರಿದೆ. ಹುಲ್ಲು ಸುಡುವ ಪ್ರದೇಶದಿಂದ ಹೊರ ಬರುವ ಬಿಸಿ ಗಾಳಿಯ ಪರಿಣಾಮದಿಂದ ವಾಯುಮಾಲಿನ್ಯ ಪ್ರಮಾಣದಲ್ಲಿ ಏರಿಕೆಯಾಗಲು ಒಂದು ಕಾರಣವಾಗಿದೆ. ಇದರಿಂದ ಸುಮಾರು 700-1000 ಮೀ ತಾಪಮಾನ ಏರಿಕೆ ಕಂಡಿದೆ ಎಂದು ವರದಿಗಳು ಹೇಳುತ್ತವೆ. ಈ ಹಿನ್ನೆಲೆ BS-VI ಕಂಪ್ಲೈಂಟ್ ಇಲ್ಲದ ಡೀಸೆಲ್ ನಾಲ್ಕು-ಚಕ್ರಗಳ ವಾಹನಗಳ ಬಳಕೆಯನ್ನು ಮತ್ತು ಟ್ರಕ್ಗಳ ಪ್ರವೇಶವನ್ನು ನಿಷೇಧಿಸಿದೆ.

ದೆಹಲಿ-ಎನ್ಸಿಆರ್ನಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನಾಳೆಯಿಂದ ಮುಂದಿನ ಆದೇಶದವರೆಗೆ ದೆಹಲಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಮ-ಬೆಸ ನೀತಿಯನ್ನು ಪರಿಗಣಿಸಿ ಅಗತ್ಯಬಿದ್ದರೆ ಮತ್ತೊಮ್ಮೆ ಜಾರಿಗೊಳಿಸಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಉತ್ತರ ಭಾರತವನ್ನು ಮಾಲಿನ್ಯದಿಂದ ರಕ್ಷಿಸಲು ಕೇಂದ್ರ ವಿಶೇಷ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ದೂಷಣೆ, ರಾಜಕೀಯ ಮಾಡುವ ಸಮಯ ಇದಲ್ಲ, ಜನರ ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದ್ದಾರೆ.




