ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಬೆಂಗಳೂರಿನ ಅಭಿವೃದ್ಧಿಗೆ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು. ನಗರದಲ್ಲಿ ಇಂದು ಬೆಂಗಳೂರಿನ ನಿರ್ಮಾರ್ತೃ ಕೆಂಪೇಗೌಡರ 108 ಅಡಿ ಎತ್ತರದ ‘ಪ್ರಗತಿಯ ಪ್ರತಿಮೆ’ ಅನಾವರಣ ಮತ್ತು ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೆಂಪೇಗೌಡರ ದೂರದೃಷ್ಟಿ ಅತ್ಯದ್ಭುತವಾಗಿತ್ತು. ವ್ಯಾಪಾರದ ವ್ಯವಸ್ಥೆ ಬದಲಾಗಿದೆ. ನಾಡಪ್ರಭು ಕೆಂಪೇಗೌಡರ ಕೊಡುಗೆ ದೊಡ್ಡದು. ಗವಿ ಗಂಗಾಧರೇಶ್ವರ ಮಂದಿರ, ಬಸವನಗುಡಿಯ ಮಂದಿರ ಸೇರಿ ಬೆಂಗಳೂರಿನ ಸಾಂಸ್ಕøತಿಕತೆಯನ್ನು ಬಿಂಬಿಸುತ್ತದೆ ಎಂದು ತಿಳಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿದೆ. ಆಧುನಿಕ ಮೂಲಸೌಕರ್ಯದ ಮೂಲಕ ನಗರವನ್ನು ಸಜ್ಜುಗೊಳಿಸಬೇಕಿದೆ ಎಂದು ಅವರು ತಿಳಿಸಿದರು. ಸಂಚಾರದ ವಿವಿಧ ಮಾಧ್ಯಮಗಳು ಒಂದಕ್ಕೊಂದು ಪೂರಕವಾಗಿರಬೇಕು. ಅದನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಭಾರತದ ವಿಕಾಸಕ್ಕೆ ಗರಿಷ್ಠ ಪ್ರಯತ್ನ ನಡೆಸಿದ್ದೇವೆ. ಇದಕ್ಕೆ ಕರ್ನಾಟಕದ ಡಬಲ್ ಎಂಜಿನ್ ಸರಕಾರವು ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಕರ್ನಾಟಕದಲ್ಲಿ 8 ಲಕ್ಷ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಜಲಜೀವನ್ ಮಿಷನ್ ಅಡಿ ಕರ್ನಾಟಕದಲ್ಲಿ 30 ಲಕ್ಷಕ್ಕೂ ಹೆಚ್ಚು ನಳ್ಳಿ ನೀರು ಸೌಲಭ್ಯ ಕೊಟ್ಟಿದ್ದೇವೆ. ಆಯುಷ್ಮಾನ್ ಯೋಜನೆ ಮೂಲಕ ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಸಿಕ್ಕಿದೆ. ಮಹಿಳೆಯರು ಇದರ ಗರಿಷ್ಠ ಪ್ರಯೋಜನ ಪಡೆದಿದ್ದಾರೆ ಎಂದು ಸಂತಸ ಸೂಚಿಸಿದರು. ಬಡವರು ಸೇರಿ ಎಲ್ಲ ವರ್ಗದ ಜನರಿಗೆ ವಿವಿಧ ಯೋಜನೆಗಳ ಪ್ರಯೋಜನ ಲಭಸಿದೆ ಎಂದು ವಿವರ ನೀಡಿದರು.
ಪಿಎಂ ಕಿಸಾನ್ ಸಮ್ಮಾನ್ ಮೂಲಕ ಕರ್ನಾಟಕದಲ್ಲಿ 11 ಸಾವಿರ ಕೋಟಿ ನಿಧಿ ಲಭಿಸಿದೆ ಎಂದ ಅವರು, ಏಕ ಭಾರತ ಶ್ರೇಷ್ಠ ಭಾರತ ಚಿಂತನೆ ಜಾರಿಯಾಗಿದೆ. ಅಯೋಧ್ಯೆ, ಕಾಶಿ ಯಾತ್ರೆ, ಶಿರಡಿ ಯಾತ್ರೆ ಸುಖದ ಅನುಭವ ನೀಡುತ್ತಿದೆ. ಸಂತ ಕನಕದಾಸರು ಕುಲಕುಲವೆಂದು ಹೊಡೆದಾಡಿದರಿ ಎಂಬ ಸಂದೇಶ ಕೊಟ್ಟಿದ್ದಾರೆ. ತೃಣಧಾನ್ಯದ ಮಹತ್ವವನ್ನು ಕನಕದಾಸರು ಸಾರಿ ಹೇಳಿದ್ದರು. ರಾಗಿಯ ಉದಾಹರಣೆ ನೀಡಿದ ಅವರು ಸಾಮಾಜಿಕ ಸಮಾನತೆಯ ಸಂದೇಶ ನೀಡಿದ್ದರು.

ಡಿಜಿಟಲ್ ಕರೆನ್ಸಿ ಬಗ್ಗೆ 2014ರ ಮೊದಲು ಚಿಂತನೆಯೇ ನಡೆಯುತ್ತಿರಲಿಲ್ಲ. ಹಿಂದಿನ ಸರಕಾರವು ವೇಗವಾಗಿ ಚಲಿಸಲು ಬಯಸುತ್ತಿರಲಿಲ್ಲ. ನಾವು ವೇಗವಾಗಿ ಮುನ್ನಡೆಯಲು ಬಯಸುತ್ತಿದ್ದೇವೆ. ಪಿಎಂ ಗತಿಶಕ್ತಿ ಮೂಲಕ ದೇಶದ ವಿಕಾಸ ನಡೆದಿದೆ. ಮೂಲಸೌಕರ್ಯಕ್ಕೆ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು. ಜಗತ್ತಿನಲ್ಲಿ ಭಾರತದ ಬಗ್ಗೆ ಗೌರವಾದರ ಹೆಚ್ಚಾಗಿದೆ. ಇದರ ಪ್ರಯೋಜನ ಕರ್ನಾಟಕಕ್ಕೂ ಲಭಿಸುತ್ತಿದೆ. ಎಫ್ಡಿಐ ಹೂಡಿಕೆ ಪ್ರಮಾಣವು ಕೇವಲ ಐಟಿಗೆ ಸೀಮಿತವಾಗಿಲ್ಲ. ಬಯೋ ಟೆಕ್ನಾಲಜಿ, ರಕ್ಷಣಾ ಕ್ಷೇತ್ರದಲ್ಲೂ ಹೂಡಿಕೆ ಹೆಚ್ಚಾಗಿದೆ ಎಂದು ಪ್ರಶಂಸಿಸಿದರು.
ಹೆಲಿಕಾಪ್ಟರ್, ಐಟಿ, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸೇರಿ ವಿವಿಧ ಕ್ಷೇತ್ರಗಳಿಗೆ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕ ಫಾರ್ಚೂನ್ 500 ಕಂಪೆನಿಗಳಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಕರ್ನಾಟಕ ಡಬಲ್ ಎಂಜಿನ್ ತಾಕತ್ತಿನಿಂದ ಮುಂದೆ ಸಾಗುತ್ತಿದೆ ಎಂದು ತಿಳಿಸಿದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಯು ಭವಿಷ್ಯದ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡಲಿದೆ. ಸ್ಟಾರ್ಟಪ್ಗಳನ್ನು ಸಶಕ್ತಗೊಳಿಸುವಲ್ಲಿ ಬೆಂಗಳೂರಿನ ಕೊಡುಗೆ ಅತ್ಯಂತ ದೊಡ್ಡದು. ಒಂದೇ ಕಂಪೆನಿಯಿಂದ ಸ್ಟಾರ್ಟಪ್ ಆಗಲಾರದು. ಹೊಸತರ ಚಿಂತನೆ, ಅದರ ಅನುಷ್ಠಾನದ ಮೂಲಕ ವಿಶ್ವಾಸ ಮೂಡಿಸುವ ಕಾರ್ಯ ನಡೆಯಬೇಕು. ಅದನ್ನು ಇಲ್ಲಿ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಈ ಕಾರ್ಯಕ್ರಮವೂ ಬೆಂಗಳೂರಿನ ಹೆಸರನ್ನು ಉಜ್ವಲಗೊಳಿಸಲಿದೆ. ಮುಂದಿನ ದಿನಗಳಲ್ಲಿ ಭಾರತದ ಸಂಚಾರ ವ್ಯವಸ್ಥೆಯ ಪ್ರತೀಕವಾಗಿ ವೇಗದ ರೈಲು ಉದ್ಘಾಟನೆಯಾಗಿದೆ. ಮುಂದಿನ 8-10 ವರ್ಷಗಳಲ್ಲಿ ಭಾರತೀಯ ರೈಲಿನ ಕಾಯಕಲ್ಪವನ್ನು ಗಮನಿಸಿ ಮುಂದಡಿ ಇಡುತ್ತಿದ್ದೇವೆ. 400ಕ್ಕೂ ಹೆಚ್ಚು ವೇಗದ ರೈಲುಗಳು, ವಿಸ್ತಾಡೋಮ್ ರೈಲು ಉದ್ಘಾಟನೆ ನೆರವೇರಲಿದೆ ಎಂದು ತಿಳಿಸಿದರು.
ರೈಲ್ವೆ ನಿಲ್ದಾಣಗಳ ನವೀಕರಣ, ದ್ವಿಪಥದ ಮೂಲಕ ಹಳಿಗಳನ್ನು ಆಧುನೀಕರಣಗೊಳಿಸುವ ಕಾರ್ಯ ನಡೆದಿದೆ. ಬೆಂಗಳೂರಿನ ಕಂಟೋನ್ಮೆಂಟ್, ಯಶವಂತಪುರ ರೈಲ್ವೆ ನಿಲ್ದಾಣಗಳ ಆಧುನೀಕರಣ ನಡೆಯುತ್ತಿದೆ ಎಂದರು. ವಿಮಾನನಿಲ್ದಾಣಗಳ ಸಂಖ್ಯೆ ಹೆಚ್ಚಳದ ಬೇಡಿಕೆಯೂ ಇದೆ. ಇಲ್ಲಿನ ಹೊಸ ಟರ್ಮಿನಲ್ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ದೇಶ ಮುನ್ನಡೆಯುತ್ತಿದೆ. ವಿಮಾನನಿಲ್ದಾಣದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿದೆ. 2014ಕ್ಕೆ ಮೊದಲು ದೇಶದಲ್ಲಿ 70 ಹತ್ತಿರ ಇದ್ದ ವಿಮಾನನಿಲ್ದಾಣದ ಸಂಖ್ಯೆ 140ಕ್ಕೂ ಹೆಚ್ಚಾಗಿದೆ ಎಂದು ವಿವರಿಸಿದರು.
ಕರ್ನಾಟಕಕ್ಕೆ ಮೊದಲ ವಂದೇ ಭಾರತ್ ರೈಲು ಲಭಿಸಿದೆ. ಇದು ಚೆನ್ನೈ- ಸ್ಟಾರ್ಟಪ್ ನಗರ ಬೆಂಗಳೂರು- ಮೈಸೂರನ್ನು ಇದು ಜೋಡಿಸಲಿದೆ. ಅಯೋಧ್ಯೆ, ಪ್ರಯಾಗ್ರಾಜ್, ಕಾಶಿ ದರ್ಶನಕ್ಕೆ ರೈಲಿಗೂ, ವಿಮಾನನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ನೆರವೇರಿದೆ. ಇವೆಲ್ಲ ಬೆಂಗಳೂರಿನ ಜನರ ಹಳೆಯ ಬೇಡಿಕೆಯಾಗಿತ್ತು ಎಂದು ತಿಳಿಸಿದರು. ‘ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು’ ಎಂದು ಜನರ ಹರ್ಷೋದ್ಗಾರದ ನಡುವೆ ಪ್ರಧಾನಿಯವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಸಂತ ಕನಕದಾಸ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಿದರು. ಗೌರವಾನ್ವಿತ ಮಹಿಳೆ ಒನಕೆ ಓಬವ್ವ ಅವರಿಗೂ ನಮನಗಳು ಎಂದರು.

ಇದಕ್ಕೂ ಮೊದಲು ಕನಕದಾಸರು ಮತ್ತು ವಾಲ್ಮೀಕಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಅವರು, ಭಾರತ್ ಗೌರವ್ ಕಾಶಿ ದರ್ಶನ, ಅತ್ಯಂತ ವೇಗವಾಗಿ ಚಲಿಸುವ ರೈಲು ‘ಮೈಸೂರು- ಚೆನ್ನೈ ವಂದೇ ಭಾರತ್ ಎಕ್ಸ್ಪ್ರೆಸ್’ ಗೂ ಚಾಲನೆ ನೀಡಿದರು. ಮೋದಿಯವರು ತೆರಳುವ ಮಾರ್ಗಮಧ್ಯದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪ್ರಧಾನಿಗೆ ಅದ್ದೂರಿ ಸ್ವಾಗತ ಲಭಿಸಿತು. ‘ಮೋದಿ ಮೋದಿ’ ಘೋಷಣೆಗಳನ್ನು ಕೂಗುತ್ತ ಜನರು ಪ್ರಧಾನಿಯವರನ್ನು ಸಂಭ್ರಮದಿಂದ ಸ್ವಾಗತಿಸಿದರು.
#PRIME MINISTER NARENDRA MODI #NADAPRABHU KEMPEGOWDA STATUE #ADICHUNCHANGIRI SRI NIRMALANANDA SWAMIJI #CM BASAVARAJ BOMMAI #B S YEDIYURAPPA #PRAHALLAD JOSHI




