ಮಂಡ್ಯ: ನನ್ನ ವಿರುದ್ದ ನೀವಿಬ್ರೂ ಪಕ್ಷೇತರರಾಗಿ ಸ್ಪರ್ಧೆ ಮಾಡಿ, ನಿಮ್ಮ ವಿರುದ್ದ ನಾನು ಗೆಲ್ಲದಿದ್ದರೆ ಶಿರಚ್ಚೇದ ಮಾಡಿಕೊಳ್ಳುತ್ತೇನೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಸವಾಲು ಹಾಕಿದ್ದಾರೆ.
ನಾಗಮಂಗಲ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಚಿವ ಎನ್. ಚಲುವರಾಯಸ್ವಾಮಿಗೆ ಬಹಿರಂಗ ಸವಾಲ್ ಹಾಕಿದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ, ನೀವಿಬ್ಬರೂ ಪಕ್ಷ ಬಿಟ್ಟು ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಿ, ಪಕ್ಷದ ಮೇಲೆ ನಿಂತರೆ ಯಾರ್ ಬೇಕಾದ್ರು ಗೆಲ್ತಾರೆ ಬನ್ನಿ ಪಕ್ಷೇತರರಾಗಿ ನಿಲ್ಲೋಣ ಎಂದು ಸವಾಲು ಹಾಕಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ. ಮಲ್ಲಿಗೆರೆ ಗ್ರಾಮದಲ್ಲಿ ಈ ಹೇಳಿಕೆ ನೀಡಿರುವ ಎಲ್ ಆರ್ ಶಿವರಾಮೇಗೌಡ, ಇದು ಬಹಿರಂಗ ಸವಾಲು ಎಂದು ತಾಕೀತು ಮಾಡಿದ್ದಾರೆ. ನಾಗಮಂಗಲದಲ್ಲಿ ಈ ಬಾರಿ ಸುರೇಶ್ ಗೌಡರೇ ಅಭ್ಯರ್ಥಿಯಾದ್ರೆ ಜೆಡಿಎಸ್ ಸೋಲುತ್ತೆ, ಅಭ್ಯರ್ಥಿ ಬದಲಿಸಲಿದ್ದರೆ ನಾಗಮಂಗಲಕ್ಕೆ ಕುಮಾರಸ್ವಾಮಿಯಾದಿಯಾಗಿ ಯಾರೇ ಬಂದ್ರೂ ಸುರೇಶ್ ಗೌಡ ಗೆಲ್ಲಲ್ಲ ಎಂದು ಶಿವರಾಮೇಗೌಡ ಭವಿಷ್ಯ ನುಡಿದಿದ್ದಾರೆ.
ಹಿಂದೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಆಗಿತ್ತು ನಿಜ. ಆದರೆ ಜಿಲ್ಲೆಯ ಕೆಲ ಭಟ್ಟಂಗಿಗಳ ದುರ್ವರ್ತನೆಯಿಂದ ಜೆಡಿಎಸ್ ಭದ್ರಕೋಟೆ ಕುಸಿದಿದೆ. ನನಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಅವರುಗಳ ಬಗ್ಗೆ ಗೌರವ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಈ ಹಿಂದೆ ನಾನು ಎರಡು ಬಾರಿ ಪಕ್ಷೇತರರಾಗಿ ನಿಂತು ಚುನಾವಣೆಯಲ್ಲಿ ಗೆದ್ದಿದ್ದೀನಿ, ಆ ಟೈಂ ನಲ್ಲಿ ನನ್ ಮೇಲೆ ಕೊಲೆ ಕೇಸ್ ಹಾಕ್ಸಿ ಕೊಡಬಾರದ ಹಿಂಸೆ ಕೊಟ್ರು, ಶಿವರಾಮೇಗೌಡ ಐದೇ ತಿಂಗಳು ಸಂಸದನಾಗಿದ್ದರೂ ಜಿಲ್ಲೆಗೆ ಪಾಸ್ ಪೋರ್ಟ್ ಕಚೇರಿ ತಂದಿದ್ದೀನಿ ಎಂದು ತಿಳಿಸಿದರು.

ಪ್ರಸ್ತುತ ಇರುವ ಸಂಸದ ಸುಮಲತಾ ಅವರು ಈ ರೀತಿ ಒಂದಾದರೂ ಕೆಲಸ ಮಾಡಿದ್ದಾರೆ ಎಂದು ಜನರು ಪ್ರಶ್ನಿಸಬೇಕು ಎಂದು ಹೇಳಿದರು. ನಾನೇ ಪೂರ್ಣವಧಿ ಸಂಸದ ಆಗಿದ್ದರೆ ಪ್ರಧಾನ ಮಂತ್ರಿ ಯಾರೇ ಆಗಿದ್ರೂ, ಅವರ ಕಾಲು ಕಟ್ಟಿ ಹಣ ತಂದು ಮೂರು ಸಾವಿರ ಹಳ್ಳಿಗಳಿಗೆ ಸಮುದಾಯ ಭವನ ಕಟ್ಟಿಸುತ್ತಿದ್ದೆ ಎಂದು ಶಿವರಾಮೇಗೌಡ ತಿಳಿಸಿದರು.
#L R SHIVARAME GOWDA #JDS #CONGRESS #BJP #SURESH GOWDA #CHELUVARAYASWAMY #INDIPENDENT #CONTEST #NAGAMANGALA #MLA #CONSTITUENCY #SUMALATHA AMBARISH #MP #HD DEVEGOWDA #HD KUMARASWAMY




