ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ಬಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿ ಗೀತಾ ಹುಡೇದ, ಚಾಮರಾಜನಗರ ತಹಶೀಲ್ದಾರ್ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದ್ದಾರೆ.

ಸರಗೂರಿನಿಂದ ಬಂದಿದ್ದ ಯುವಕರು “ಮಹಿಳೆ ನೀರು ಕುಡಿದಿದ್ದಕ್ಕೆ ನಿಮ್ಮ ಊರಿನ ಜನರು ಸ್ವಚ್ಚ ಮಾಡಿಸಿದರು” ಎಂದು ಹೆಗ್ಗೋಠಾರ ಗ್ರಾಮದ ಯುವಕನಿಗೆ ತಿಳಿಸಿದ್ದು ತಹಸಿಲ್ದಾರ್ ಮುಂದೆ ಆ ಯುವಕ ಅಮಾನವೀಯ ಘಟನೆ ನಡೆಯಿತು ಎಂವ ಸರಗೂರು ಗ್ರಾಮದವರು ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾನೆ.
ಗ್ರಾಮದ ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು:

ಸಭೆ ಬಳಿಕ ತಹಸಿಲ್ದಾರ್ ಬಸವರಾಜು ಅವರು ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ. ಜೊತೆಗೆ, ತೊಂಬೆಗಳ ಮೇಲೆ ‘ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು’ ಎಂದು ಬರೆಸಿದ್ದಾರೆ.
ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆಕೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಏನಿದು ಘಟನೆ:
ಕಳೆದ ಶುಕ್ರವಾರ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಎಚ್.ಡಿ.ಕೋಟೆ ತಾಲೂಕಿನ ಸರಗೂರು ಗ್ರಾಮಸ್ಥರು ಬಂದಿದ್ದರು.
ಮಧ್ಯಾಹ್ನದ ಊಟ ಮುಗಿಸಿ ಬಸ್ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗಿದೆ.




