Not 1962 Anymore’: Arunachal CM Pema Khandu’s First Reaction ; ಭಾರತದ ನೆಲ ಕಬಳಿಸಲು ಇದು 1962 ಅಲ್ಲ: ಚೀನಾಗೆ ಅರುಣಾಚಲ ಸಿಎಂ ವಾರ್ನಿಂಗ್..!

ಇಟಾನಗರ: ಲಡಾಖ್‌ ಗಡಿ ಘರ್ಷಣೆ ಬಳಿಕ ಭಾರತದತ್ತ ತಿರುಗಿ ನೋಡಲು ಭಯಪಡುತ್ತಿದ್ದ ಚೀನಿ ಡ್ರ್ಯಾಗನ್‌, ಇದೀಗ ಅರುಣಾಚಲ ಪ್ರದೇಶದಲ್ಲಿ ಮತ್ತೆ ಕಿರಿಕ್‌ ಆರಂಭಿಸಿದೆ. ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ ಬಳಿಯ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ಭಾರತೀಯ ಸೈನಿಕರೊಂದಿಗೆ ಜಟಾಪಟಿ ನಡೆಸಿರುವ ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ(ಪಿಎಲ್‌ಎ) ಸೈನಿಕರು, ಮತ್ತೊಂದು ಸುತ್ತಿನ ಗಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ತವಾಂಗ್‌ ಘರ್ಷಣೆ ಇದೀಗ ಭಾರತದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಒದಗಿಸಿದ್ದು, ವಿಪಕ್ಷಗಳು ಒಟ್ಟಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿವೆ. ತವಾಂಗ್‌ ಘರ್ಷಣೆ ಬಗ್ಗೆ ಮೋದಿ ಸರ್ಕಾರ ದೇಶದ ಮುಂದೆ, ವಾಸ್ತವ ಸ್ಥಿತಿ ಬಿಚ್ಚಿಡಬೇಕು ಎಂದು ವಿಪಕ್ಷಗಳು ಆಗ್ರಹಿಸುತ್ತಿವೆ.

ಈ ಮಧ್ಯೆ ತವಾಂಗ್‌ ಘರ್ಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು, ಭಾರತದ ನೆಲವನ್ನು ಕಬಳಿಸುವ ಪ್ರಯತ್ನಗಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಲಿದೆ ಎಂದು ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಲ್ಲಿ ಮಾತನಾಡಿದ ಪೆಮಾ ಖಂಡು, ಚೀನಿ ಸೈನಿಕರ ಪ್ರಚೋದನೆಯೇ ತವಾಂಗ್‌ ಘರ್ಷಣೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಭಾರತದ ನೆಲವನ್ನು ಯಾರಾದರೂ ಅತಿಕ್ರಮಣ ಮಾಡಲು ಯತ್ನಿಸಿದರೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ. ಭಾರತದ ಮೇಲೆ ದಾಳಿ ಮಾಡಿ ನಮ್ಮ ನೆಲವನ್ನು ಕಬಳಿಸಲು ಇದು 1962ರ ಕಾಲವಲ್ಲ ಎಂಬುದನ್ನು ಚೀನಾ ಮರೆಯಬಾರದು ಎಂದು ಪೆಮಾ ಖಂಡು ಟ್ವೀಟ್‌ ಮೂಲಕ ಘರ್ಜಿಸಿದ್ದಾರೆ.

More News