ಬೆಳಗಾವಿ ; ಡಿ.18: ಗಡಿ ವಿವಾದದ ಬಿಸಿಯ ನಡುವೆ ವಿಧಾನ ಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಕೆ ಮಾಡಿರುವ ವಿಚಾರ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭಾರೀ ಸದ್ದು ಗದ್ದಲಕ್ಕೆ ವೇದಿಕೆ ಸಜ್ಜಾಗಲಿದೆ.

ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಹಾಗೂ ಜೆಡಿಎಸ್ ತಂತ್ರ ರೂಪಿಸಿರುವಾಗಲೇ ಇದಕ್ಕೆ ಪ್ರತಿತಂತ್ರ ಹೂಡಿರುವ ಸರ್ಕಾರ, ಸಾವರ್ಕರ್ ಫೋಟೋವನ್ನು ವಿಧಾನಸಭೆಯ ಸಭಾಂಗಣದಲ್ಲಿ ಅಳವಡಿಕೆ ಮಾಡುವ ಮೂಲಕ ಅಜೆಂಡಾ ಸೆಟ್ ಮಾಡಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ದಿಕ್ಕು ತಪ್ಪಿಸಲು ಸಾವರ್ಕರ್ ವಿಚಾರವನ್ನು ಮುನ್ನಲೆಗೆ ತಂದಿದೆ. ಸದನದ ಗಮನಕ್ಕೆ ತಾರದೇ ಸದನದ ಅನುಮತಿ ಪಡೆಯದೇ ಭಾವಚಿತ್ರ ಅಳವಡಿಕೆ ಮಾಡಿರುವುದನ್ನು ಸೋಮವಾರ ಸದನದಲ್ಲಿ ಕಾಂಗ್ರೆಸ್ ವಿರೋಧ ಮಾಡುವ ಸಾಧ್ಯತೆ ದಟ್ಟವಾಗಿದೆ.

ವಿಧಾನಸಭೆಯ ಸಭಾಂಗಣದಲ್ಲಿ ಒಟ್ಟು ಆರು ಭಾವಚಿತ್ರ ಅಳವಡಿಕೆ ಮಾಡಲಾಗಿದೆ. ಈ ಪೈಕಿ ಸಾವರ್ಕರ್ ಫೋಟೋ ಕೂಡಾ ಇದೆ. ಸರ್ಕಾರದ ಜತೆ ಚರ್ಚಿಸಿ ಭಾವಚಿತ್ರ ಅಳವಡಿಕೆಗೆ ಸ್ಪೀಕರ್ ಕಾಗೇರಿ ಅನುಮತಿ ನೀಡಿದ್ದಾರೆ.
ಸೋಮವಾರ ಕಲಾಪ ಆರಂಭ ಸಂದರ್ಭದಲ್ಲಿ ಭಾವಚಿತ್ರಗಳ ಅನಾವರಣಗೊಳ್ಳಲಿದ್ದು, ಸದನದಲ್ಲಿ ಗದ್ದಲ ಗೊಂದಲಕ್ಕೆ ಕಾರಣವಾಗಲಿದೆ. ಕಾಂಗ್ರೆಸ್ ಇದನ್ನು ವಿರೋಧ ಮಾಡಿದರೆ ಬೆಳಗಾವಿ ಚಳಿಗಾಲದ ಅಧಿವೇಶನ ಪ್ರತಿಭಟನೆ – ಧರಣಿ ಹಾಗೂ ಹೋರಾಟದಿಂದ ಹಾದಿ ತಪ್ಪುವ ಸಾಧ್ಯತೆ ದಟ್ಟವಾಗಿದೆ.




