ಬೆಂಗಳೂರು:ಡಿ.26: ಕ್ರಾಂತಿ ಸಿನಿಮಾ ಪ್ರಚಾರದ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗ್ತಿದೆ.
ನಟ ದರ್ಶನ್ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾ ಪ್ರಚಾರದ ಮಾಡುತ್ತಿದ್ದ ವೇಳೆ ಪುನೀತ್ ಅಭಿಮಾನಿ ಎನ್ನಲಾದ ವ್ಯಕ್ತಿಯೋರ್ವ ನಟನ ಮೇಲೆ ಚಪ್ಪಲಿ ಎಸೆದಿದ್ದ.. ಈ ಪ್ರಕರಣ ಭಾರೀ ಟೀಕೆಗೆ, ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಒಕ್ಕೊರಲಿನಿಂದ ವಿರೋಧಿಸಿದ್ದ ಸ್ಯಾಂಡಲ್ ವುಡ್ ಸಿನಿ ತಾರೆಯರು, ದರ್ಶನ್ ಪರ ನಿಂತಿದ್ದರು. ಜೊತೆಗೆ ಆರೋಪಿಗಳನ್ನು ಬಂಧಿಸಬೇಕೆಂಬ ಒತ್ತಡ ವೂ ಪೊಲೀಸ್ ಇಲಾಖೆಗೆ ಎದುರಾಯಿತು. ಹೀಗಾಗಿ ಆರೋಪಿಗಳ ಬಲೆ ಬೀಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಇದೀಗ ವಿಜಯನಗರ ಜಿಲ್ಲೆಯ ಎಸ್ಪಿ ಮಾರ್ಗದರ್ಶನದಲ್ಲಿ ಹಾಗೂ ಡಿಎಸ್ಪಿ ಅವರ ನೇತೃತ್ವದಲ್ಲಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, ಇದೇ ತಿಂಗಳ 18ನೇ ತಾರೀಕು ಹೊಸಪೇಟೆಯಲ್ಲಿ ‘ಕ್ರಾಂತಿ’ ಸಿನಿಮಾದ ಎರಡನೇ ಸಾಂಗ್ ರಿಲೀಸ್ ಮಾಡಲು ಹೋಗಿದ್ದರು. ಈ ವೇಳೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದರು. ಈ ಸಂಬಂಧ ಕ್ರಾರ್ಯಕ್ರಮದ ಆಯೋಜಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಲ್ಲಿ ಅಪರಾಧ ಸಂಖ್ಯೆ 180/2022 ಅಡಿಯಲ್ಲಿ ದೂರನ್ನು ದಾಖಲಿಸಿ, ತನಿಖೆಯನ್ನು ನಡೆಸಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿದ್ದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಹೊಸಪೇಟೆ ಪೊಲೀಸ್ ಠಾಣೆಯ ಪಿ ಐ ಬಾಳನ ಗೌಡ, ಮುನಿರತ್ನಂ ಪಿಎಸ್ಐ ಸಿಬ್ಬಂದಿಯವರಾದ ರಾಘವೇಂದ್ರ, ಪ್ರಕಾಶ್ ಕಳಕ ರೆಡ್ಡಿ, ಶ್ರೀನಿವಾಸ, ಜಾವೇದ್ ಹಾಗೂ ಪರಶುರಾಮ ನಾಯ್ಕ ತಂಡವು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸೂಕ್ಷ್ಮ ವಿಚಾರವಾಗಿರೋ ಕಾರಣ ಆರೋಪಿಗಳ ಹೆಸರನ್ನು ಬಹಿರಂಗ ಪಡಿಸದ ಪೊಲೀಸರು ಉಳಿದವರಿಗಾಗಿ ಹುಡುಕಾಟ ಶುರುವಿಟ್ಟಿದ್ದಾರೆ.




