ಬೆಂಗಳೂರು; ಡಿ.31: ಅಮಿತ್ ಶಾ ರಾಜ್ಯಕ್ಕೆ ಬಂದಿದ್ದು ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು, ಅವರು ಹಳೆ ಮೈಸೂರಿಗೆ ಬಂದಿದ್ದರಿಂದ ದಕ್ಷಿಣ ಕರ್ನಾಟಕದಲ್ಲಿಯೂ ಪಕ್ಷಕ್ಕೆ ಸದೃಢಗೊಳ್ಳಲು ಸಹಕಾರಿಯಾಗಲಿದ್ದು,2023 ರಲ್ಲಿಯೂ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಅರಮನೆ ಮೈದಾನದಲ್ಲಿ ಬೆಂಗಳೂರು ಮಹಾನಗರ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ದೇಶಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ದ ಎನ್ನುವ ದೇಶ ಭಕ್ತರ ಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಸದಸ್ಯರು, ಬಿಜೆಪಿ ಸದಸ್ಯರು ದೇಶಸೇವೆ. ನಾವು ಭಾರತ್ ಮಾತಾ ಕಿ ಜೈ, ಕಾಂಗ್ರೆಸ್, ಇಟಲಿ ಮಾತೆಗೆ ಜೈ ಎನ್ನುತ್ತಾರೆ. ಈ ದೇಶವನ್ನು ಉಳಿಸಿ ಬೆಳೆಸಿ ಉಜ್ವಲ ಭವಿಷ್ಯ ಬಿಜೆಪಿಯಿಂದ ಮಾತ್ರ ಸಾಧ್ಯ.ದೇಶದ ಅಖಂಡತೆ,ಏಕತೆ, ಸುರಕ್ಷತೆ, ಆರ್ಥಿಕತೆ ಎಲ್ಲವೂ ಬಿಜೆಪಿ ಮಾಡಲು ಸಾಧ್ಯ. ದೇಶದ ಯಶಸ್ಸಿಗೆ ನೀತಿ, ಸಿದ್ದಾಂತ, ನಾಯಕತ್ವ, ಕ್ರಿಯಾಶೀಲ ಸದಸ್ಯರು ಮುಖ್ಯ, ನಮಗೆ ಮೋದಿ ನಾಯಕತ್ವ ಸಿಕ್ಕಿದೆ.ದೇಶವನ್ನ ಯಾವ ರೀತಿ ಮುನ್ನಡೆಸಬೇಕು ಎನ್ನುವ ಸ್ಪಷ್ಟತೆ ಇರುವ ನಾಯಕ, ಭಾರತ ಮನಮೋಹನ್ ಸಿಂಗ್ ಅವಧಿಯಲ್ಲಿ ಹಿಂದೆ ಹೋಯಿತು, ಭ್ರಷ್ಟತೆಯಿಂದ ಆಳ್ವಿಕೆ ಮಾಡಿದರು.ಇದಕ್ಕೆಲ್ಲಾ ಮೋದಿ ಸರ್ಕಾರ ಗುಜರಾತ್ ಮಾಡೆಲ್ ಮೂಲಕ ಇತಿಶ್ರೀ ಹಾಡಿದೆ ಎಂದರು.

ಕಾಶ್ಮೀರ ಇಷ್ಟು ವರ್ಷ ಯಾಕೆ ವಿಶೇಷ ಸ್ಥಾನಮಾನದಿಂದ ಮುಕ್ತವಾಗಲಿಲ್ಲ. ಗಡಿ, ನೆಲ ಜಲ ರಕ್ಷಣೆ ಮಾಡದವರು ದೇಶಕ್ಕೆ ಬೇಡ ಎನ್ನುವ ತೀರ್ಮಾನ ಜನ ಮಾಡಿದ್ದಾರೆ. ಕರ್ನಾಟಕವನ್ನು ಹಿಂದುಳಿದ ರಾಜ್ಯವನ್ನಾಗಿ ಮಾಡಲು ಸಿದ್ದರಾಮಯ್ಯ ಸರ್ಕಾರ ಮಾಡಿತು. ಕೋವಿಡ್ ಇಲ್ಲಿದಿದ್ದರೂ ಎರಡು ಲಕ್ಷ ಕೋಟಿ ಸಾಲ ಮಾಡಿದರು. ಆದರೂ ನಮಗೆ ಸಾಲ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಲೋಕಾಯುಕ್ತ ಯಾಕೆ ಮುಚ್ಚಿದರು? ತಮ್ಮನ್ನು ರಕ್ಷಿಸಿಕೊಳ್ಳಲು ಎಸಿಬಿ ಮಾಡಿದರು, ಎಲ್ಲ ಹಗರಣ ಆರೋಪಕ್ಕೂ ಎಸಿಬಿ ಬಿ ರಿಪೋರ್ಟ್ ಕೊಟ್ಟಿದೆ ಇದೇ ಎಸಿಬಿ ರಚಿಸಿ ಭ್ರಷ್ಟಾಚಾರದಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿತ್ತು ಎನ್ನುವುದಕ್ಕೆ ನಿದರ್ಶನ, ಆದರೆ ನಾವು ಲೋಕಾಯುಕ್ತದ ಮೂಲಕ ಎಲ್ಲ ತನಿಖೆ ಮಾಡಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಅಮಿತ್ ಶಾ ರಾಜ್ಯಕ್ಕೆ ಬಂದಿದ್ದು ಪಕ್ಷಕ್ಕೆ ಆನೆ ಬಲ ತಂದಂತಾಗಿದೆ. ಬಿಜೆಪಿ ಉತ್ತರ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಕರ್ನಾಟಕದಲ್ಲಿಯೂ ಸದೃಢವಾಗಲಿದೆ, ನಮ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ.ಮತ್ತೊಮ್ಮೆ ನಮಗೆ ಅಧಿಕಾರ ಶತಃಸಿದ್ದ, ಬೂತ್ ಗೆದ್ದರೆ ಚುನಾವಣೆ ಗೆದ್ದಂತೆ ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ಬೂತ್ ನಲ್ಲಿ ಬಹುಮತ ತರುವ ಸಂಕಲ್ಪ ತೊಡುವಂತೆ ಕರೆ ನೀಡಿದರು.
ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್:

ದೇಶ ಮತ್ತು ರಾಜ್ಯದಲ್ಲಿ ಕುಟುಂಬ ರಾಜಕಾರಣ ಇರೋದಿಲ್ಲ, ಈ ಕುಟುಂಬ ರಾಜಕಾರಣದಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿ ಕಾರ್ಯಗಳು ನಾಶವಾಗಿವೆ ಹೀಗಾಗಿ ಬರುವಂತ ದಿನಗಳಲ್ಲಿ ಕರ್ನಾಟಕದಲ್ಲೂ ಕುಟುಂಬ ರಾಜಕಾರಣ ಇರೋದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು. ಸಾವಿರ ಜನರಲ್ಲಿ ಆರುನೂರು ಜನ ಮತ ಹಾಕಲಿದ್ದಾರೆ. ಮ್ಯಾಕ್ರೋ ಮ್ಯಾನೇಜ್ಮೆಂಟ್ ಮಾಡಬೇಕಿದೆ. ಬಿಎಲ್ಒಗಳನ್ನೇ ನಮ್ಮ ಬೂತ್ ಏಜೆಂಟ್ ಮಾಡಬೇಕು ಎನ್ನುವ ಚಿಂತನೆ ಇದೆ. ಪ್ರತಿ ಬೂತ್ ನಲ್ಲಿ ನಾವು ಬಹುಮತಗಳಿಸಿದಾಗ ನಮಗೆ ಗೆಲುವು ಖಚಿತ, ನಮ್ಮ ನಮ್ಮ ಬೂತ್ ಗಳಲ್ಲಿ ಬಹುಮತ ತರುವ ಸಂಕಲ್ಪ ಮಾಡಬೇಕು ಎಂದು ಜೋಷಿ ಕರೆ ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿತ್ತು ಆದರೆ ಈಗ ಅಭಿವೃದ್ಧಿ ಚರ್ಚೆ ಆಗುತ್ತಿದೆ. ಜಿ ಶೃಂಗದ ಆತಿಥ್ಯ ಭಾರತಕ್ಕೆ ಸಿಕ್ಕಿದೆ. ಮೋದಿ ನೇತೃತ್ವದಲ್ಲಿ ದೇಶಕ್ಕೆ ಗೌರವ ಸಿಗುವ ಕೆಲಸವಾಗುತ್ತಿದೆ ಎಂದು ಮೋದಿ ಆಳ್ವಿಕೆಯನ್ನು ಸಮರ್ಥಿಸಿಕೊಂಡರು.
ಸಿಎಂ ಕನಸಿನಲ್ಲಿ ಶರ್ಟ್ ಪ್ಯಾಂಟ್ ಹೊಲಿಸಿಕೊಂಡವರಲ್ಲಿ ತಳಮಳ:
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಶರ್ಟ್, ಪ್ಯಾಂಟ್ ಹೊಲಿಸಿಕೊಂಡು ಕಾದು ಕುಳಿತಿದ್ದವರಿಗೆ ಅಮಿತ್ ಶಾ ರಾಜ್ಯ ಪ್ರವಾಸದಿಂದ ತಳಮಳ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹಳೆ ಮೈಸೂರಿನ ಮಂಡ್ಯದಲ್ಲಿ ರಾಜ್ಯದ ರಾಜಕೀಯ ಬದಲಾವಣೆ ಮಾಡುವ ಸಂಕಲ್ಪ ಅಮಿತ್ ಶಾ ಮಾಡಿದ್ದಾರೆ.ಇದನ್ನು ನೋಡಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಗಿ ಶರ್ಟ್, ಪ್ಯಾಂಟ್ ಹೊಲಿಸಿದವರಲ್ಲಿ ಮತ್ತು ಜೆಡಿಎಸ್ ನಲ್ಲಿ ತಳಮಳ ಶುರುವಾಗಿದೆ. ಹಾಸನದಲ್ಲಿ ಈ ಬಾರಿ ನಮ್ಮ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲಿದೆ.ಶೆ.60 ರ ಮತ ಪಡೆದು, 150 ಸ್ಥಾನ ಗೆಲ್ಲಲು ಬೂತ್ ವಿಜಯ ಅಭಿಯಾನ ನಡೆಸಲಾಗುತ್ತಿದೆ. ಇದು ಮುಂದೆ ಬಿಜೆಪಿಯ ವಿಜಯ ಸಂಕಲ್ಪ ಆಗಲಿದೆ ಎಂದರು.

ಬೆಂಕಿ ಬಿರುಗಾಳಿ ತಡೆಯಲು ಕಾಂಗ್ರೆಸ್ ಗೆ ಅಸಾಧ್ಯ:
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಕಿ-ಬಿರುಗಾಳಿಯಂತೆ, ಇವರಿಬ್ಬರು ರಾಜ್ಯಕ್ಕೆ ಬಂದರೆ ಅದನ್ನು ತಡೆಯಲು ಕಾಂಗ್ರೆಸ್ ನವರಿಗೆ ಸಾಧ್ಯವಾ ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಹದಿನೈದು ದಿನಕ್ಕೊಮ್ಮೆ ರಾಜ್ಯಕ್ಕೆ ಬರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮಿತ್ ಶಾ ಕೂಡ ರಾಜ್ಯ ಬರುವುದಾಗಿ ತಿಳಿಸಿದ್ದಾರೆ.ಇವರು ಬೆಂಕಿ ಬಿರುಗಾಳಿ, ಇವರಿಬ್ಬರು ಬಂದರೆ ತಡೆಯಲು ಇವರಿಗೆ ಆಗುತ್ತಾ? ಇವರು ರಾಹುಲ್ ಗಾಂಧಿಯನ್ನ ನಂಬಿದ್ದಾರೆ ಅವರು ಗಡ್ಡ ಬಿಟ್ಟು ಸನ್ಯಾಸಿಯಾಗುತ್ತಿದ್ದಾರೆ. ಆ ಬಿರುಗಾಳಿ ತಡೆಯಲು ಇವರಿಂದ ಅಸಾಧ್ಯ ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ಇದೇ ಕಡೆ ಚುನಾವಣೆ ಎಂದಿದ್ದಾರೆ ಅವರನ್ನು ಈಗಲೇ ಮನೆಗೆ ಕಳಿಸೋಣ, ಡಿಕೆ ಶಿವಕುಮಾರ್ ಕನಕಪುರಕ್ಕೆ ಸೀಮಿತ ನಾಯಕ, ರಾಜ್ಯದಲ್ಲಿ ಅವರ ಪ್ರಭಾವ ಇಲ್ಲ, ಬೆಂಗಳೂರು ಹೆಚ್ಚು ಗೆದ್ದರೆ ರಾಜ್ಯ ಗೆದ್ದಂತೆ, ಅಮಿತ್ ಶಾ ನಮಗೆ ಟಾರ್ಗೆಟ್ ಕೊಟ್ಟಿದ್ದಾರೆ. ರಾಮಮಂದಿರ ಆಗಿದೆ, ಕಾಶ್ಮೀರ ನಮ್ಮದಾಗಿದೆ ಈ ರೀತಿ ನಾವು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ.ಉಳಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ, ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲಿದ್ದೇವೆ ಎಂದರು.




