ಬೆಂಗಳೂರು ಜ.20: ಫೆಬ್ರವರಿ 10ರಿಂದ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ಆರಂಭಿಸಲು ತೀರ್ಮಾನಿಸಲಾಗಿದೆ. ಫೆಬ್ರವರಿ 10ಕ್ಕೆ ಆರಂಭವಾಗಲಿರುವ ಜಂಟಿ ಅಧಿವೇಶನ ಉದ್ದೇಶಿಸಿ, ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಫೆ.17ರಂದು ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಬಳಿಕ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಎಷ್ಟು ದಿನ ಅಧಿವೇಶನ ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕಲ್ಲು ಕ್ವಾರಿ ಗುತ್ತಿಗೆ ಪ್ರದೇಶ ಮರುಹೊಂದಾಣಿಕೆಗೆ ಅಸ್ತು:
ಮ್ಯಾನ್ವಲ್ ಆಗಿ ಕಲ್ಲು ಕ್ವಾರಿ ನಡೆಸುವವರು ಮೂಲ ಗುತ್ತಿಗೆ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಕ್ವಾರಿ ನಡೆಸುತ್ತಿದ್ದರೆ, ಆ ಪ್ರದೇಶವನ್ನು ಮರಹೊಂದಾಣಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಮ್ಯಾನ್ವಲ್ ಆಗಿ ಕಲ್ಲು ಕ್ವಾರಿ ಮಾಡುವವರು ತಮಗೆ ಗುತ್ತಿಗೆ ಮಂಜೂರಾದ ಪ್ರದೇಶವನ್ನು ಬಿಟ್ಟು ಆಕಸ್ಮಿಕವಾಗಿ ಗೊತ್ತಿಲ್ಲದೆ ಪಕ್ಕದಲ್ಲಿ ಕ್ವಾರಿ ನಡೆಸಿದರೆ ಅಂಥ ಪ್ರದೇಶವನ್ನು ಮರು ಹೊಂದಾಣಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹೈ ಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಗಣಿ ಅಧಿಕಾರಿಗಳು ಸೂಕ್ತ ಅನಿಸಿದರೆ ಮಂಜೂರಾದ ಮೂಲ ಗುತ್ತಿಗೆ ಪ್ರದೇಶವನ್ನು ಮರು ಹೊಂದಾಣಿಕೆ ಮಾಡಲು ಅನುಮತಿ ನೀಡಲಾಗಿದೆ ಎಂದರು.
ಈ ಸಂಬಂಧ ಮ್ಯಾನ್ವಲ್ ಆಗಿ ಕ್ವಾರಿ ನಡೆಸುವವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಮಂಜೂರಾದ ಮೂಲ ಗುತ್ತಿಗೆ ಪ್ರದೇಶ ಬಿಟ್ಟು ಕಲ್ಲು ಕ್ವಾರಿ ನಡೆಸುವ ಪ್ರದೇಶವನ್ನು ಸಕ್ರಮಗೊಳಿಸಲಾಗುತ್ತದೆ. ಕಲ್ಲು ಗಣಿಕಾರಿಗೆ ಮಾಡದೇ ಉಳಿದಿರುವ ಮೂಲ ಗುತ್ತಿಗೆ ಪ್ರದೇಶವನ್ನು ವಾಪಾಸು ವಶಕ್ಕೆ ಪಡೆಯಲಾಗುತ್ತದೆ ಎಂದ ತಿಳಿಸಿದರು.
ಕಬ್ಬು ಸೆಸ್ ಮೊತ್ತ ಪರಿಷ್ಕರಣೆಗೆ ತೀರ್ಮಾನ:

ಕಬ್ಬು ಮತ್ತು ಇತರ ಸಕ್ಕರೆ ಅಂಶ ಹೊಂದಿರುವ ಬೆಳೆಗಳ ಬೇಸಾಯದ ಸಂಶೋಧನೆ ಕೈಗೊಳ್ಳುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕ್ಕರೆ ನಿಯಂತ್ರಣ ನಿಯಮಕ್ಕೆ ತಿದ್ದುಪಡಿ ಮಾಡಿ ಸೆಸ್ ಸಂಗ್ರಹ ಮೊತ್ತ ಪರಿಷ್ಕರಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅದರಂರೆ ಕನಿಷ್ಠ 2500 ಟಿಸಿಡಿ ಕಬ್ಬು ಅರೆಯುವುದಕ್ಕೆ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ 10,000 ಸೆಸ್ ವಿಧಿಸಲಾಗುತ್ತಿತ್ತು. ಅದನ್ನು 50,000 ಏರಿಕೆ ಮಾಡಲಾಗಿದೆ. 2500-5000 ಟಿಸಿಡಿಗೆ 15,000 ರೂ. ಇದ್ದ ಸೆಸ್ ನ್ನು ಒಂದು ಲಕ್ಷ ರೂ.ಗೆ ಹಾಗೂ 5,000 ಟಿಸಿಡಿ ಅಧಿಕ ಕಬ್ಬು ಅರೆಯುವುದರ ಮೇಲೆ 25,000 ರೂ. ವಿಧಿಸುತ್ತಿದ್ದ ಸೆಸ್ ನ್ನು 1.50 ಲಕ್ಷ ರೂ.ಗೆ, 15,000 ಟಿಸಿಡಿಗಿಂತ ಹೆಚ್ಚು ಕಬ್ಬು ಅರೆಯುವವುದಕ್ಕೆ 2 ಲಕ್ಷ ರೂ. ಸೆಸ್ ಹೆಚ್ಚಳ ಮಾಡಿದ್ದೇವೆ. ಸುಮಾರು 30-40 ವರ್ಷದಿಂದ ಸೆಸ್ ಮೊತ್ತ ಪರಿಷ್ಕರಿಸಿರಲಿಲ್ಲ. ಹೀಗಾಗಿ ಸೆಸ್ ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳೇನು?:

– ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ 54.6 ಕೋಟಿ ಶೇರು ಬಂಡವಾಳ ಎತ್ತುವಳಿ ಮಾಡಲು ಅನುಮತಿ
- ಕರ್ನಾಟಕ ರಾಜ್ಯ ಹಣಕಾಸು ನಿಗಮದ ಎನ್ ಪಿಎಯಾದ ತೀರುವಳಿಗೆ ಒನ್ಟೈಂ ಇತ್ಯರ್ಥಕ್ಕೆ ಅವಕಾಶ ನೀಡಲು ತೀರ್ಮಾನ. ಸಣ್ಣ ಪ್ರಮಾಣದ ಒನ್ಟೈಂ ಸೆಟ್ಲೆಂಮೆಂಟ್ ಗೆ 2003-2023ವರೆಗೆ ಅನ್ವಯವಾಗುವಂತೆ ಅವಕಾಶ ನೀಡಲಾಗುವುದು. ಸದ್ಯ ನಿಗಮದಲ್ಲಿ ಅಸಲು 127 ಕೋಟಿ ರೂ.ಬಾಕಿ ಇದ್ದರೆ, 217.65 ಕೋಟಿ ಬಡ್ಡಿ ಮೊತ್ತ ಬಾಕಿ ಇದೆ. ಒಟ್ಟು 345 ಕೋಟಿ ರೂ. ಬಾಕಿ ಇದೆ.
- ಸರ್ಕಾರದ ಎಚ್ ಆರ್ ಎಂಎಸ್ ವ್ಯವಸ್ಥೆಗೆ ಹೊಸ
ಸಾಫ್ಟ್ ವೇರ್ ಅಳವಡಿಕೆಗೆ 40 ಕೋಟಿ ರೂ. ಅನುದಾನಕ್ಕೆ ಅಸ್ತು - ಪಿಎಂ ಅಭೀಮ್ ಯೋಜನೆಯಡಿ 114 ನಗರ ಕ್ಲೀನಿಕ್ ಗೆ ಅವಕಾಶ ಕೊಟ್ಟಿದ್ದು,ನಮ್ಮ ಕ್ಲಿನಿಕ್ ಆಗಿ ರೂಪಾಂತರ ವಾಗಿರಲಿದೆ.
- ಎಎನ್ ಎಂ ಸೆಂಟರ್ ಹೆಚ್ಚು ಶಕ್ತಿ ನೀಡಲು ಸಿಬ್ಬಂದಿ ನಿಯೋಜನೆಗೆ ಒಪ್ಪಿಗೆ. ಒಟ್ಟು 847 ಕೇಂದ್ರಗಳ ಮೇಲ್ದರ್ಜೆಗೇರಿಸಲು ಒಪ್ಪಿಗೆ. 71.56 ಕೋಟಿ ರೂ. ಮೊತ್ತಕ್ಕೆ ಅಸ್ತು.
- ಕಿತ್ತೂರು ತಾಲೂಕಿನ 50 ಹಾಸಿಗೆ ಆಸ್ಪತ್ರೆಯನ್ನು ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ. 19 ಕೋಟಿ ರೂ. ಅನುದಾನಕ್ಕೆ ಅನುಮೋದನೆ
- ಮಡಿಕೇರಿ, ಬೆಳಗಾವಿ, ಚಿತ್ರದುರ್ಗ ಆಸ್ಪತ್ರೆ ಯಲ್ಲಿ ಕ್ರಿಟಿಕಲ್ ಕೇರ್ ಘಟಕ ಆರಂಭಿಸಲು ಅನುಮೋದನೆ.
- ತರೀಕೆರೆಯ ಕಲ್ಲತ್ತಹಳ್ಳಕ್ಕೆ ಆರು ಪಿಕಪ್, ಒಂದು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 20 ಕೋಟಿ ರೂ.ಗೆ ಅಸ್ತು
- ನೂರು ಅಂಬೇಡ್ಕರ್ ಹಾಸ್ಟೆಲ್ ನಿರ್ಮಾಣಕ್ಕೆ 600 ಕೋಟಿ ರೂ.ಗೆ ಅನುಮೋದನೆ
- ಬೀದರ್ ಔರಾದ್ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು 23 ಕೋಟಿ ರೂ.ಗೆ ಅನುಮೋದನೆ
- ಹೊಸನಗರದ ಕ್ಷತ್ರಿಯ ಮರಾಠ ಯುವ ವೇದಿಕೆಗೆ ಮಕ್ಕಳ ಹಾಸ್ಟೆಲ್ ನಿರ್ಮಾಣಕ್ಕಾಗಿ 2 ಎಕರೆ ಜಮೀನು ಪರಾಭಾರೆ ಮಾಡಲು ಅಸ್ತು
- ಕಲಾಸಿಪಾಳ್ಯ ನವೀನ ಮಾದರಿ ಬಸ್ ನಿಲ್ದಾಣಕ್ಕೆ 63 ಕೋಟಿ ರೂ. ಘಟನೋತ್ತರ ಅನುಮತಿ.
- ಸ್ಪೂರ್ತಿ ಯೋಜನೆ ಅನುಷ್ಟಾನಕ್ಕೆ 12.51 ಕೋಟಿ ರೂ. ಅನುಮೋದನೆ. ಬಾಲ ವಿವಾಹ ತಡೆಯುವುದು ಸೇರಿ ಶಿಕ್ಷಣ ನೀಡಲು ಎನ್ ಜಿಒ ಬಳಕೆ. ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಿದ್ದು, ಈಗ ಬಾಗಲಕೋಟೆ, ವಿಜಯಪುರ ಸೇರಿ ಹನ್ನೊಂದು ತಾಲೂಕುಗಳಲ್ಲಿ ಅನುಷ್ಠಾನ.
- ಉಡುಪಿ, ಶಿವಮೊಗ್ಗ, ಉ.ಕ.ದಲ್ಲಿ ನಾರಾಯಣ ಗುರು ಸ್ಮರಣಾರ್ಥ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆ ಸ್ಥಾಪನೆಗೆ 72 ಕೋಟಿ ರೂ. ಅನುದಾನಕ್ಕೆ ಅಸ್ತು
- ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 5% ಸೈಟ್ ನ್ನು ಮೃತ ಮಾಜಿ ಸೈನಿಕರ ಕುಟುಂಬಕ್ಕೆ ನೀಡಲು ನಿಯಮ ತಿದ್ದುಪಡಿಗೆ ತೀರ್ಮಾನ




