Marriage Proposal : ವಿವಾಹಿತ ಮಹಿಳೆಗೆ ದೈವ ನರ್ತಕನಿಂದ ಮದುವೆ ಪ್ರಪೋಸ್..!?

ಬೆಂಗಳೂರು.ಫೆ.5: ಕಾಂತಾರ ಸಿನಿಮಾ ಬಿಡುಗಡೆ ಕಂಡ ಬಳಿಕ ದೈವ ನರ್ತನದ ಸುದ್ದಿ ದಿನಕ್ಕೊಂದು ಕೇಳಿ ಬರ್ತಿದೆ.. ಕಾಂತಾರ ಬಿಡುಗಡೆ ಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಬೆನ್ನಲ್ಲೇ ಅದೇ ಮಟ್ಟದಲ್ಲಿ ದೈವ ನರ್ತಕರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಈ ಮೊದಲು ಜನರ ಕಷ್ಟಕ್ಕಷ್ಟೇ ಸ್ಪಂಧಿಸುತ್ತಿದ್ದ ದೈವ ನರ್ತಕರು ಬರು ಬರುತ್ತ ವಿಧಾನಸಭೆ ಚುನಾವಣೆ ರಿಸಲ್ಟ್ , ಪ್ರೇಮ ವಿಚಾರ, ಶೇರು ಮಾರುಕಟ್ಟೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಭವಿಷ್ಯ ನುಡಿಯಲು ಪ್ರಾರಂಭಿಸಿದವು.. ಇದೇ ರೀತಿ ಕಾರವಾರದಲ್ಲಿ ದೈವ ನರ್ತಕನೊಬ್ಬ ಕಷ್ಟ ತೋಡಿಕೊಳ್ಳಲು ಬಂದಂತಹ ಮಹಿಳೆಗೆ ಸಮಾಧಾನ ಮಾಡಿ ಕಳಿಸೋದರ ಬದಲಿಗೆ ಮದುವೆಯಾಗುವ ಅಭಯ ನೀಡಿ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡೋಂಗಿ ಬಾಬಾಗಳ ಹಾವಳಿ ಜೋರಾಗಿಯೇ ಇದೆ. ಅದರ ನಡುವೆ ಇದೀಗ ರಾಜ್ಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ದೈವ ನರ್ತಕ ವಿವಾಹಿತ ಮಹಿಳೆಗೆ ದೈವದ ಹೆಸರಿನಲ್ಲಿ ಮದುವೆಯಾಗ್ತೀನಿ ಅಂತ ಹೇಳಿರುವುದು ಇದೀಗ ವಿವಾದದ ಸಂಗತಿಯಾಗಿದೆ. ಬೆಳಗಾವಿ ಮೂಲದ ಮಹಿಳೆಯೊಬ್ಬರು ಉತ್ತರ ಕನ್ನಡದ ಅಂಬಾರಕೊಡ್ಲ ಗ್ರಾಮದಲ್ಲಿನ ದೈವನರ್ತಕ ಚಂದ್ರಹಾಸ ಅವರ ಬಳಿಗೆ ಬದುಕಿನ ಕಷ್ಟಗಳನ್ನು ಹಂಚಿಕೊಳ್ಳುವ ಸಲುವಾಗಿ ಬಂದಿದ್ದರು. ಅದಕ್ಕೆ ಪರಿಹಾರ ಸೂಚಿಸಬೇಕು ಅಥವಾ ಪರ್ಯಾಯ ಮಾರ್ಗವನ್ನು ತೋರಬೇಕು. ಅದು ಅವರು ಮಾಡಲು ಸಾಧ್ಯವಿರುವ ಮಾರ್ಗ. ಆದರೆ, ಆ ದೈವ ನರ್ತಕ ಒಂದು ಹೆಜ್ಜೆ ಮುಂದು ಹೋಗಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಭೆಯಲ್ಲಿ ದೇವರ ಸೇವೆಗಾಗಿ ನಾನು ಮದುವೆಯಾಗುವೆ ಎಂದಿದ್ದಾರೆ. ಇದೀಗ ಇದೊಂದು ವಿವಾದವಾಗಿ ರೂಪಗೊಂಡಿದ್ದು, ಎಲ್ಲಡೆ ಆಕ್ರೋಶಕ್ಕೆ ಕಾರಣವಾಗಿದೆ.

ದೈವ ನರ್ತಕ ಹೇಳಿದ್ದ ಹೇಳಿಕೆಯು ದೊಡ್ಡ ವಿವಾದವಾಗಿ ಬದಲಾಗುತ್ತಿದ್ದಂತೆಯೇ ನರ್ತಕ ಎಸ್ಕೇಪ್ ಆಗಿದ್ದಾನೆ. ಆತನ ಪೋನ್ ಸ್ವಿಚ್ ಆಪ್ ನಲ್ಲಿದೆ.ಕೆಂಡದಮಾಸ್ತಿ ದುರ್ಗಾ ದೇವಸ್ಥಾನದಲ್ಲಿ ಯಾರೂ ಇಲ್ಲ. ಈ ಬಗ್ಗೆ ಅವರ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ದೈವ ನರ್ತಕನು ನೀಡಿರುವ ಹೇಳಿಕೆಯು ಎಲ್ಲೆಡೆ ಚರ್ಚಿತವಾಗುತ್ತಿದೆ. ದೈವ ನರ್ತಕ ಅಷ್ಟೇ ಅಲ್ಲದೆ ಅವರಿಂದ ಮಾತು ಪಡೆದ ಮಹಿಳೆ ಸಹ ಕಾಣಿಸುತ್ತಿಲ್ಲ. ಪತ್ನಿ ಮತ್ತು ಮಗಳು ಹೊಂದಿರುವ ದೈವ ನರ್ತಕ ಮಂದಹಾಸ ವಿವಾಹಿತ ಮಹಿಳೆ ಜೊತೆ ಪರಾರಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನೂ, ಈ ಪ್ರಕರಣ ಕುರಿತು ಜನಶಕ್ತಿ ವೇದಿಕೆಯು ದೂರು ದಾಖಲಿಸಲು ಮುಂದಾಗಿದೆ.

More News